ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅಳಿಯನನ್ನು ಕೊಲೆ ಮಾಡಿ ಬಳಿಕ ಆತನ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ವಿಚಿತ್ರ ಘಟನೆಯೊಂದು ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಪೂರ್ವ ಗೋದಾವರಿಯ ರೌತುಲಪುಡಿ ಮಂಡಲದ ಧರ ಜಗನ್ನಾಥಪುರಂ ಗ್ರಾಮದಲ್ಲಿ ನಡೆದಿದೆ. ಸತ್ಯನಾರಾಯಣ್(56) ಅಳಿಯ ಪಂಪನಪಾಯಿನ ಲಕ್ಷ್ಮಣ್(25) ಕೊಲೆ ಮಾಡಿದ್ದಾನೆ.
ಆಗಸ್ಟ್ 9ರಂದು ಲಕ್ಷ್ಮಣ್, ಮಾವ ಸತ್ಯನಾರಾಯಣ್ ಮನೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಸಿಟ್ಟಿನಿಂದ ಸತ್ಯನಾರಾಯಣ್ ಅಳಿಯ ಲಕ್ಷ್ಮಣ್ನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಬೆಳಗ್ಗೆ 11.30ರ ಸುಮಾರಿಗೆ ಸತ್ಯನಾರಾಯಣ್ ಅಳಿಯನ ರುಂಡದೊಂದಿಗೆ ಅನ್ನವರಂ ಪೊಲೀಸ್ ಠಾಣೆಗೆ ತೆರಳಿ, ಪೊಲೀಸರಿಗೆ ಶರಣಾಗಿದ್ದಾನೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ರಂಬಾಬು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
10 ತಿಂಗಳ ಹಿಂದೆ ಲಕ್ಷ್ಮಣ್ ಪತ್ನಿ ಪಾವನಿ ತೀರಿಕೊಂಡಿದ್ದಳು. ಆ ಬಳಿಕ ಇಬ್ಬರು ಹೆಣ್ಣು ಮಕ್ಕಳು ಪಾವನಿ ತಂದೆ(ಸತ್ಯನಾರಾಣ್) ಮನೆಯಲ್ಲಿ ಇದ್ದಾರೆ. ಇತ್ತ ಮಗಳು ಸಾವನ್ನಪ್ಪಿ 10 ತಿಂಗಳ ಕಾರ್ಯಕ್ರಮವನ್ನು ಆಗಸ್ಟ್ 8 ರಂದು ಸತ್ಯನಾರಾಯಣ್ ಇಟ್ಟುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅಳಿಯನನ್ನು ಮನೆಗೆ ಕರೆದಿದ್ದಾನೆ.
ಕಾರ್ಯಕ್ರಮದ ಮರುದಿನ ಅಂದರೆ ಆಗಸ್ಟ್ 9 ರಂದು ಸತ್ಯನಾರಾಯಣ್, ನಿನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗ ಎಂದು ಹೇಳಿದ್ದಾರೆ. ಈ ವೇಳೆ ಲಕ್ಷ್ಮಣ್, ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ನನಗೆ ಎರಡನೇ ಮದುವೆ ಮಾಡಿದರೆ ಮಾತ್ರ ಮಕ್ಕಳನ್ನು ಕರೆದೊಯ್ಯುತ್ತೇನೆ. ಇಲ್ಲವೆಂದರೆ ಕರೆದುಕೊಂಡು ಹೋಗಲ್ಲ ಎಂದು ಮಾವನಿಗೆ ತಿಳಿಸಿದ್ದಾನೆ.
ಅಳಿಯನ ಪ್ರಸ್ತಾಪವನ್ನು ಮಾವ ತೀವ್ರವಾಗಿ ವಿರೋಧಿಸಿದನು. ಈ ಸಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಜಗಳ ತಾರಕಕ್ಕೇರಿ ಅಳಿಯನನ್ನು ಮಾವ ಕೊಂದು ಪೊಲೀಸರಿಗೆ ಶರಣಾದನು ಎಂದು ಸರ್ಕಲ್ ಇನ್ಸ್ ಪೆಕ್ಟರ್ ರಂಬಾಬು ವಿವರಿಸಿದ್ದಾರೆ.