– ಯೋಗೇಶ್ವರ್ ಹೆಸರು ಹೇಳದೆ ಎಚ್ಡಿಕೆ ಟಾಂಗ್
ರಾಮನಗರ: ಇವತ್ತು ಮಂತ್ರಿ ಆಗ್ತೀನಿ, ನಾಳೆ ಮಂತ್ರಿ ಆಗ್ತೀನಿ ಎಂದು ಹೇಳಿ ಜನರನ್ನ ಸೆಳೆಯುತ್ತಿದ್ದಾರೆ. ಅಲ್ಲದೆ ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್ ಆಕ್ಷನ್ ಹಾಕಿಕೊಂಡು ಕೂತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರು ಹೇಳದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಏನೋ ಮಾಡ್ತೀನಿ ಎಂದು ಹೋದರು ಏನೂ ಮಾಡಲಿಕ್ಕೆ ಆಗಲಿಲ್ಲ. ಮತ್ತೊಂದೆಡೆ ಇವತ್ತು ಮಂತ್ರಿ ಆಗ್ತೀನಿ, ನಾಳೆ ಮಂತ್ರಿ ಆಗ್ತೀನಿ ಎಂದು ಹೇಳಿ ಜನರನ್ನ ಸೆಳೆಯುತ್ತಿದ್ದಾರೆ. ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್ ಆಕ್ಷನ್ ಹಾಕಿಕೊಂಡು ಕೂತಿದ್ದಾರೆ. ಈ ರೀತಿ ಹಣ ಸಂಪಾದನೆ ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.
ಇಲ್ಲಿನ ಪಿಎಸ್ಐ ವರ್ಗಾವಣೆಗೆ 30 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದಾರೆ. 30 ಲಕ್ಷ ಹಣ ಕೊಟ್ಟು ಬಂದರೆ ಪಿಎಸ್ಐ ಜನರ ಜೀಬಿಗೆ ಕೈ ಹಾಕಬೇಕು. ಇದನ್ನ ಬಿಟ್ಟು ಇವರ ಜೇಬಿಗೆ ಕೈ ಹಾಕ್ತಾರಾ ಜೀವನದಲ್ಲಿ ಮನುಷ್ಯನಿಗೆ ದುಡ್ಡು ಬೇಕು. ಹಾಗಂತ ಹಗಲು ದರೋಡೆ ಮಾಡಬಾರದು. ಈ ರೀತಿ ಮಾಡಿಕೊಂಡಿರುವುದಕ್ಕಿಂತ ಗೌರವಯುತವಾಗಿ ರಾಜಕೀಯ ಬಿಟ್ಟು ಮನೆಯಲ್ಲಿ ಇರೋದು ಒಳ್ಳೆಯದು ಎಂದು ಯೋಗೀಶ್ವರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.