ರಾಯಚೂರು: ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮಂತ್ರಾಲಯ ಗ್ರಾಮ ಜಲಾವೃತವಾಗಿದ್ದು ಎಲ್ಲೆಡೆ ನೀರು ನುಗ್ಗಿದೆ.
ಇಲ್ಲಿನ ಕಲ್ಲುದೇವಕುಂಟ ಹಳ್ಳ ತುಂಬಿ ಮಂತ್ರಾಲಯಕ್ಕೆ ನೀರು ನುಗ್ಗಿದ್ದು, ಕರ್ನಾಟಕ ಭವನ, ಕಲ್ಯಾಣ ಮಂಟಪ, ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿತ್ತು. ಬೆಳಗ್ಗೆ ಮಳೆ ಸ್ವಲ್ಪ ತಗ್ಗಿರುವುದರಿಂದ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.
ಎಮ್ಮಿಗನೂರು ರಸ್ತೆಯ ಹಳ್ಳ ಉಕ್ಕಿಹರಿದ ಪರಿಣಾಮ ಮಂತ್ರಾಲಯಕ್ಕೆ ನೀರು ನುಗ್ಗಿದ್ದು, ಮಂತ್ರಾಲಯ – ಬೆಂಗಳೂರು ರಸ್ತೆ ಮಾರ್ಗ ಬಂದ್ ಆಗಿದೆ. ಮಂತ್ರಾಲಯ ಗ್ರಾಮದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದವಸ ಧಾನ್ಯ ಸೇರಿದಂತೆ ಮನೆಯಲ್ಲಿ ವಸ್ತುಗಳೆಲ್ಲಾ ಹಾಳಾಗಿವೆ.
ಮಂತ್ರಾಲಯದಲ್ಲಿನ ಕರ್ನಾಟಕ ಭವನಕ್ಕೂ ಮಳೆ ನೀರು ನುಗ್ಗಿದೆ. ರಸ್ತೆ ಹಾಗೂ ಕರ್ನಾಟಕ ಭವನದ ಮುಂದೆ ನಿಲ್ಲಿಸಲಾಗಿದ್ದ ಕಾರು ಹಾಗೂ ಬೈಕ್ ಗಳು ನೀರಿನಲ್ಲಿ ತೇಲಾಡುತ್ತಿವೆ. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಮದುವೆಗೆ ಬಂದಿದ್ದ ಜನ ಕುರ್ಚಿಗಳೆಲ್ಲಾ ನೀರಿನಲ್ಲಿ ತೇಲಾಡುವುದನ್ನು ನೋಡಿ ಫಜೀತಿಗೀಡಾಗಿದ್ದಾರೆ. ಮಂತ್ರಾಲಯ ಭಾಗದಲ್ಲಿ ಮಳೆ ಇನ್ನೂ ಮುಂದುವರೆದಿದೆ. ಇದನ್ನೂ ಓದಿ: ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ