– ಕೇವಲ 120 ರೂ.ಗೆ ಸಿಗಲಿದೆ ಆಯುರ್ವೇದ ಗಣೇಶ
ಮಂಡ್ಯ: ಕೊರೊನಾ ಹಿನ್ನೆಲೆ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲು ಆಗುತ್ತಿಲ್ಲ. ಆದರೆ ಅರ್ಥಗರ್ಭಿತವಾಗಿ ಆಚರಿಸಬಹುದು ಎಂಬುದನ್ನು ಮಂಡ್ಯದ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ತೋರಿಸಿಕೊಟ್ಟಿದ್ದು, ಜೇಡಿ ಮಣ್ಣಿನ ಹಣಪನನ್ನು ಪರಿಚಯಿಸುತ್ತಿದ್ದಾರೆ.
ನಾಳೆಯಿಂದ ಗಣೇಶ ಹಬ್ಬ ಆರಂಭವಾಗಲಿದ್ದು, ನಾಳೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಕೊರೊನಾ ನಡುವೆ ಹಬ್ಬವನ್ನು ಹೇಗೆ ಆಚರಿಸುವುದು ಎಂದು ತಲೆಕೆಡಿಸಿಕೋಳ್ಳುವವರಿಗೆ ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಕುರಿತು ತಿಳಿಸಿವೆ.
ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಖರೀದಿಸಿ, ಪೂಜಿಸಿ ಬಳಿಕ ಪಾಟ್ನಲ್ಲಿ ವಿಸರ್ಜಿಸುವುದು. ಮೂರ್ತಿ ಸಂಪೂರ್ಣ ಕರಗಿದ ಬಳಿಕ ಆಯುರ್ವೇದ ಗುಣಗಳುಳ್ಳ ಗಿಡಗಳ ಬೀಜವನ್ನು ಪಾಟ್ಗೆ ಹಾಕಿ ನೀರೆರೆಯಿರಿ. ಇದರಿಂದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜೊತೆಗೆ ಔಷಧ ಗುಣಗಳುಳ್ಳ ಗಿಡವನ್ನು ಮನೆಯಲ್ಲೇ ಬೆಳೆದಂತಾಗುತ್ತದೆ ಎಂಬುದು ಜಿಲ್ಲಾಡಳಿತದ ಪ್ಲಾನ್.
ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಐಡಿಯಾ ಚೆನ್ನಾಗಿದೆ ಆದರೆ ಜೇಡಿ ಮಣ್ಣು, ಆಯುರ್ವೇದ ಸಸಿ ಬೀಜಗಳನ್ನು ಎಲ್ಲಿಂದ ತರೋದು ಎಂದು ಚಿಂತಿಸುವವರಿಗೆ ಅದಕ್ಕೂ ಜಿಲ್ಲಾಡಳಿತ ಪರಿಹಾರ ನೀಡಿದೆ. ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ನವರು ಜಿಲ್ಲಾಡಳಿತ ಪ್ಲಾನ್ಗೆ ಪೂರಕವಾಗಿ ಜೇಡಿ ಮಣ್ಣಿನ ಗಣಪನನ್ನು ಸಿದ್ಧಪಡಿಸಿದ್ದಾರೆ. ಮೂರ್ತಿ ಜೊತೆಗೆ ಪಾಟ್ ಮತ್ತು ಔಷಧಿ ಗುಣಗಳುಳ್ಳ ಗಿಡಗಳ ಬೀಜಗಳನ್ನ ನೀಡಲಿದ್ದಾರೆ. ಅತ್ಯಂತ ಕಡಿಮೆ ಬೆಲೆ ಅಂದ್ರೆ 120ರೂ.ಗೆ ಗೌರಿ-ಗಣೇಶ ಮೂರ್ತಿಗಳು ಸಿಗಲಿದ್ದು, ಇಂತಹ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಮನೆಯಲ್ಲೇ ಬೆಳೆಸಬಹುದಾಗಿದೆ.
ಈ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಗಿದೆ. ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಉಳಿಸಬೇಕು. ಪರಿಸರ ಅಸಮತೋಲನದಿಂದ ಸಾಕಷ್ಟು ಅನಾಹುತಗಳನ್ನು ನೋಡುತ್ತಿದ್ದೇವೆ. ಹೀಗಾಗಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಜೊತೆಗೆ ಪರಿಸರ ಉಳಿಸುವ ನೂತನ ಯೋಜನೆಯನ್ನು ಬೆಂಬಲಿಸಬೇಕಿದೆ ಎಂದು ಕರೆ ನೀಡಿದ್ದಾರೆ.