ಮಂಡ್ಯ: ಕೊರೊನಾ ಮಹಾಮಾರಿ ಮರಣ ಮೃದಂಗವನ್ನು ಮುಂದುವರಿಸಿದ್ದು, ಕೊರೊನಾಗೆ ಮಂಡ್ಯದಲ್ಲಿ ಇಂದು ಮತ್ತೊಬ್ಬರು ಬಲಿಯಾಗಿದ್ದಾರೆ.
ಮಂಡ್ಯ ತಾಲೂಕು ಕೆರೆಗೋಡು ಗ್ರಾಮದ 75 ವರ್ಷದ ವೃದ್ಧೆ ಇಂದು ಸಾವನ್ನಪ್ಪಿದ್ದು, ಕಳೆದೊಂದು ವಾರದಿಂದ ಮಂಡ್ಯ ಕೋವಿಡ್-19 ಆಸ್ಪತ್ರೆಯಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಉಸಿರಾಟದ ಸಮಸ್ಯೆಯಿಂದಾಗಿ ಇಂದು ಬೆಳಗ್ಗೆ ವೃದ್ಧೆ ಸಾವನ್ನಪ್ಪಿದ್ದಾರೆ. ನಿಗದಿತ ಜಾಗದಲ್ಲಿ ಕೋವಿಡ್-19 ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತೆ ಸಿದ್ಧತೆ ಮಾಡಿಕೊಂಡಿದೆ. ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ.
ಇಂದು ವೃದ್ಧೆ ಸಾವನ್ನಪ್ಪುವ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಒಟ್ಟು 820 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 579 ಗುಣಮುಖರಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ಇನ್ನೂ 237 ಸಕ್ರಿಯ ಪ್ರಕರಣಗಳಿವೆ.