ಮಂಗಳೂರು: ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 115 ಮಂಗಳಮುಖಿಯರಿಗೆ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಿಸಲಾಯಿತು.
ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಮತ್ತು ದಿನಬಳಕೆಯ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ನೀಡಲಾಯಿತು. ಈ ಕುರಿತು ಮಂಗಳಮುಖಿಯರ ಪರವಾಗಿ ಮಾತನಾಡಿದ ಬಾಲಕೃಷ್ಣ, ಟ್ರಸ್ಟಿನ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ಲಾಕ್ಡೌನ್ ಅವಧಿಯಲ್ಲಿ ಬದುಕು ಸಾಗಿಸುವುದೇ ಸವಾಲಾಗಿತ್ತು. ಆದಾಯ ಇಲ್ಲದೆ ದಿನ ದೂಡುವುದು ಕಷ್ಟಮಯವಾಗಿತ್ತು. ಇಂತಹ ಸಮಯದಲ್ಲಿ ಮಾನವೀಯ ಹೃದಯವುಳ್ಳ ದಾನಿಗಳ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಬೆಂಗಳೂರಿನ ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನವರು ಗೌರವಪೂರ್ಣವಾಗಿ ಆಹ್ವಾನಿಸಿ ಸಹಾಯಹಸ್ತ ಚಾಚಿದ್ದಾರೆ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಹನುಮಂತ ಕಾಮತ್, ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಟ್ರಸ್ಟಿನ ಪದಾಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದರು.