ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ಕೊರೊನಾ ಸ್ಪೋಟಗೊಂಡಿದೆ. ಅನಾಥ ಆಶ್ರಮದಲ್ಲಿದ್ದ ಬರೋಬ್ಬರಿ 210 ಮಂದಿಗೆ ಒಂದೇ ದಿನ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮದಲ್ಲಿ 270 ಮಂದಿ ವೃದ್ಧರು ಮತ್ತು ಮನೋರೋಗಿಗಳಿದ್ದು, ಕೆಲ ದಿನದ ಹಿಂದೆ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಿನ್ನೆ ಎಲ್ಲರನ್ನು ರ್ಯಾಂಡಮ್ ಟೆಸ್ಟ್ ನಡೆಸಿದ್ದು, 270 ಮಂದಿಯಲ್ಲಿ ಬರೋಬ್ಬರಿ 210 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ ಕಾಲ ಸುರಿದ ಮಳೆಗೆ ಕೃತಕ ನೆರೆ
ವಿಷಯ ತಿಳಿದ ತಕ್ಷಣ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಶ್ರಮಕ್ಕೆ ಆಗಮಿಸಿ ಎಲ್ಲ ಸೋಂಕಿತರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಸದ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ರಜತಾದ್ರಿ ವಸತಿ ಗೃಹ ಕೋವಿಡ್ ಕೇರ್ ಆಗಿ ಬದಲಾಗಿದೆ.