– ತುರ್ತು ಸೇವೆ ಹೊರತು ಪಡಿಸಿ ಎಲ್ಲ ರೀತಿ ಸಂಚಾರ ಬಂದ್
– ನಿಯಂತ್ರಣ ಆಗದೇ ಇದ್ದರೆ ಮತ್ತೆ ಮುಂದುವರಿಕೆ
ಬೆಂಗಳೂರು: ದೇಶದಲ್ಲಿ ಕೊರೋನಾ ಮಹಾ ಸುನಾಮಿ ಎದ್ದಿರುವ ಕಾರಣ ಒಂದೊಂದೇ ರಾಜ್ಯಗಳು ಲಾಕ್ಡೌನ್ ಮಾದರಿಯ ಸ್ಥಿತಿಗೆ ಜಾರುತ್ತಿವೆ. ಈಗಾಗಲೇ ದೆಹಲಿ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳು ಕಠಿಣ ಲಾಕ್ಡೌನ್ ಜಾರಿ ಮಾಡಿದ್ದು, ಈ ಪಟ್ಟಿಗೆ ಇದೀಗ ಕರ್ನಾಟಕ ಕೂಡ ಸೇರಿಕೊಂಡಿದೆ.
ನಾಳೆ ರಾತ್ರಿಯಿಂದ ಇಡೀ ಕರ್ನಾಟಕ ಲಾಕ್ ಆಗಲಿದೆ. ಕಳೆದ ವಾರದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ ಜಾರಿಯಲ್ಲಿದೆ. ಆದ್ರೂ ಕೊರೋನಾ ಸಾವು ನೋವು ಕಂಟ್ರೋಲ್ಗೆ ಬರುತ್ತಿಲ್ಲ. ಬದಲಿಗೆ ಅಪಾಯದ ಮಟ್ಟವನ್ನು ಮೀರುತ್ತಿದೆ. ದೆಹಲಿ, ಮಹಾರಾಷ್ಟ್ರಕ್ಕಿಂತಲೂ ಘನಘೋರ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಇಡೀ ರಾಜ್ಯದಲ್ಲಿ 16 ದಿನಗಳ ಕಾಲ ಕಠಿಣ ಜನತಾ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೂ ಕಂಪ್ಲೀಟ್ ಲಾಕ್ಡೌನ್ ಮಾದರಿಯ ಕ್ರಮಗಳು ಜನತಾ ಕರ್ಫ್ಯೂ ರೂಪದಲ್ಲಿ ಜಾರಿಯಲ್ಲಿ ಇರಲಿವೆ. ಮೇ 12ರ ಹೊತ್ತಿಗೂ ಸೋಂಕು ಕಂಟ್ರೋಲ್ಗೆ ಬರಲಿಲ್ಲ ಅಂದರೆ ಗಲೂ, ಇದೇ ರೀತಿಯ ಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತಜ್ಞರ ಸಲಹೆ ಆಧರಿಸಿ ಕರ್ನಾಟಕ ಸರ್ಕಾರ ಈ ನಿರ್ಣಯಕ್ಕೆ ಬಂದಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂದ್ ಆಗಲಿದೆ. ನೈಟ್ ಕರ್ಫ್ಯೂ ಕೂಡ ಇಡೀ ರಾಜ್ಯದಲ್ಲಿ ಮುಂದುವರೆಯಲಿದೆ. ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವೆ ತುರ್ತು ಅಗತ್ಯ ಹೊರತು ಪಡಿಸಿ ಎಲ್ಲ ರೀತಿಯ ಸಂಚಾರವನ್ನು ಬಂದ್ ಮಾಡಲಾಗಿದೆ.
ಬೆಳಗ್ಗೆ 6ರಿಂದ 10ರವರೆಗೆ ಏನಿರುತ್ತೆ?
ಹಣ್ಣು-ತರಕಾರಿ, ದಿನಸಿ ಅಂಗಡಿ, ಹಾಲು, ಮಾಂಸ, ಮದ್ಯ(ಪಾರ್ಸೆಲ್ ಮಾತ್ರ)
ಇವು ಓಪನ್. ಷರತ್ತು ಅನ್ವಯ
* ಹೋಟೆಲ್, ರೆಸ್ಟೋರೆಂಟ್ – ಪಾರ್ಸೆಲ್ ಮಾತ್ರ
* ಮದುವೆ – 50 ಜನರಿಗಷ್ಟೇ ಅವಕಾಶ
* ಅಂತ್ಯಕ್ರಿಯೆ – ಕೋವಿಡ್ ನಿಂದ ಮೃತಪಟ್ಟರೆ 5 ಮಂದಿಗೆ ಮಾತ್ರ
ಇಡೀ ದಿನ ಏನಿರುತ್ತೆ ?
ಆಸ್ಪತ್ರೆ, ಮೆಡಿಕಲ್ ಶಾಪ್, ಬ್ಯಾಂಕ್, ಎಟಿಎಂ, ಪೆಟ್ರೋಲ್ ಬಂಕ್, ಕಟ್ಟಡ ಕಾಮಗಾರಿ, ಸಿಮೆಂಟ್, ಹಾರ್ಡ್ವೇರ್ ಶಾಪ್, ಅಗತ್ಯ ವಸ್ತುಗಳ ಉದ್ದಿಮೆ, ಸರಕು ಸಾಗಣೆ, ಕೃಷಿ ಚಟುವಟಿಕೆ
ಏನು ಇರಲ್ಲ?
ಬಿಎಂಟಿಸಿ ಬಸ್, ಕೆಎಸ್ಆರ್ಟಿಸಿ ಬಸ್, ನಮ್ಮ ಮೆಟ್ರೋ, ಕ್ಯಾಬ್, ಆಟೋ, ಖಾಸಗಿ ವಾಹನ, ಶಾಲಾ-ಕಾಲೇಜು, ಗಾರ್ಮೆಂಟ್ಸ್ ಕಾರ್ಖಾನೆ, ಎಲ್ಲಾ ಸಿನೆಮಾ ಹಾಲ್ಗಳು, ಶಾಪಿಂಗ್ ಮಾಲ್ಗಳು, ಜಿಮ್ಗಳು, ಯೋಗ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ,ಈಜು ಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್ಗಳು, ಬಾರ್ಗಳು ಮತ್ತು ಸಭಾಂಗಣಗಳು ಬಂದ್ ಆಗಲಿದೆ. ಧಾರ್ಮಿಕ ಸ್ಥಳಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ತುರ್ತು ಅಗತ್ಯಕ್ಕೆ ಕಾಯ್ದಿರಿಸಿದ ಟ್ಯಾಕ್ಸಿಗಳನ್ನು ಬಳಸಬಹುದು. ಪರಿಶೀಲನೆ ವೇಳೆ ದಾಖಲೆಗಳನ್ನು ತೋರಿಸಬೇಕಾಗುತ್ತದೆ.