ಬೆಂಗಳೂರು: ಕೋವಿಡ್-19 ಸಂಕಷ್ಟದಲ್ಲಿರುವ 150ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಸಾಮಾಗ್ರಿಗಳ ಪಡಿತರ ಕಿಟ್ ಹಾಗೂ ಮೆಡಿಕಲ್ ಕಿಟ್ಗಳನ್ನು ಅಗರವಾಲ್ ಸಮಾಜ (ಕರ್ನಾಟಕ)ದ ಅಧ್ಯಕ್ಷ ಸಂಜಯ್ ಗರ್ಗ್ ವಿತರಿಸಿದರು.
ಬೆಂಗಳೂರು ಪ್ರೆಸ್ಕ್ಲಬ್ನಲ್ಲಿಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಮತ್ತು ಅಗರವಾಲ್ ಸಮಾಜ (ಕರ್ನಾಟಕ) ಜಂಟಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಫುಡ್ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಜಯ್ ಗರ್ಗ್ ಅವರು, ಮಂಗಳಮುಖಿಯರಿಗೆ ಪಡಿತರ ಕಿಟ್ ನೀಡುತ್ತಿರುವುದು ಸಂತಸ ಉಂಟುಮಾಡಿದೆ. ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗದ ಈ ವರ್ಗದವರ ಬಗ್ಗೆ ಕಾಳಜಿ ಹೊಂದಿರುವ ಬೆಂಗಳೂರು ಛಾಯಾಚಿತ್ರ ಸಂಸ್ಥೆ ಅವರ ಮುಂದಾಳತ್ವ ಪ್ರಶಂಸನೀಯ. ಕೊರೊನಾ ವಾರಿಯರ್ಸ್ ಆಗಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಇವರ ಕಾರ್ಯ ಶ್ಲಾಘನೀಯ. ಇವರ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವಂತೆ ಮನವಿ ಮಾಡಿಕೊಂಡರು.
ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಗರವಾಲ್ ಸಮಾಜ ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಂಘದ ಜೊತೆ ಕೈ ಜೋಡಿಸಿ ಪಡಿತರ ಕಿಟ್ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಅಗರವಾಲ್ ಸಮಾಜ (ಕರ್ನಾಟಕ)ದ ಕಾರ್ಯದರ್ಶಿ ವಿಜಯ್ ಸರಫ್, ಜಂಟಿ ಕಾರ್ಯದರ್ಶಿ ಸಂಜಯ್ ಮೊಹತ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್, ಉಪಾಧ್ಯಕ್ಷ ಶೈಲೆಂದ್ರ ಭೋಜಕ್, ಕಾರ್ಯದರ್ಶಿ ಕೆ.ಎಸ್.ಗಣೇಶ್ ಉಪಸ್ಥಿತಿರಿದ್ದರು.