– ಪ್ರಶಾಂತ್ ಸಂಬರಗಿ ಜೊತೆಯೂ ರಾಹುಲ್ ಫೋಟೊ ಇದೆ
– ಮೈ ಕ್ಯಾಪ್ಟಮ್ ಈಸ್ ಯಡಿಯೂರಪ್ಪ
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ರಾಹುಲ್ ಜೊತೆ ತಮ್ಮ ಫೋಟೋ ಇರುವುದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪದ್ಮನಾಭನಗರದ ನಾಮಕರಣದ ವೇಳೆ ಫೋಟೋ ತೆಗೆಸಿಕೊಂಡಿದ್ದಾನೆ. ನಾನು ನಮ್ಮ ಕಾರ್ಯಕರ್ತನ ನಾಮಕರಣಕ್ಕೆ ಹೋಗಿದ್ದೆ ಅಷ್ಟೇ. ಈ ವೇಳೆ ಆತ ಫೋಟೋ ತೆಗೆಸಿಕೊಂಡಿದ್ದಾನೆ. ಆದರೆ ನನಗೂ ಅವನಿಗೂ ಸಂಬಂಧವಿಲ್ಲ. ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಅವರ ಜೊತೆಯೂ ಫೋಟೋ ಇದೆ ಅದಕ್ಕೆ ಅವರು ಅಪರಾಧಿನಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.
ರಾಗಿಣಿ ಜೊತೆಯೂ ನಮ್ಮ ಫೋಟೋ ಇದೆ. ಮಾಸ್ಕ್ ಅರಿವು ಮೂಡಿಸೋ ಜಾಗೃತಿ ಅಭಿಯಾನದ ಕಾರ್ಯಕ್ರಮಕ್ಕೆ ರಾಗಿಣಿ ಬಂದಿದ್ದರು. ಈ ವೇಳೆ ಸಿಎಂ ಮತ್ತು ನಮ್ಮ ಜೊತೆ ರಾಗಿಣಿ ಫೋಟೋ ತೆಗಿಸಿಕೊಂಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿದಂತೆ ಹಲವಾರು ನಾಯಕರ ಜೊತೆ ಅವರ ಫೋಟೋ ಇದೆ. ಹಾಗಾದರೆ ಅವರು ಅಪರಾಧಿನಾ. ರಾಹುಲ್ ಫೋಟೋ ಪ್ರಶಾಂತ್ ಸಂಬರಗಿ ಜೊತೆಯೂ ಇದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಫೋಟೋ ತೆಗೆಸಿಕೊಳ್ಳುತ್ತಾರೆ. ತೆಗೆಸಿಕೊಳ್ಳದಿದ್ದರೆ ಗರ್ವ ಅಂತಾರೆ. ನಮಗೂ ಅವರಿಗೂ ಸಂಬಂಧವಿಲ್ಲ. ರಾಹುಲ್ ಜೊತೆಗೆ ಇರುವ ಫೋಟೋ ನಾಲ್ಕು ವರ್ಷದ ಹಿಂದಿನ ಫೋಟೋ ಇರಬೇಕು. ಕೊರೊನಾ ಬಂದಾಗಿನಿಂದ ಯಾವುದೇ ನಾಮಕರಣಕ್ಕೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ಆರ್ ಅಶೋಕ್ ಅವರು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ನಾನು ಇಸ್ಪೀಟ್ ಎಲೆಯನ್ನೇ ನೋಡಿಲ್ಲ. ನನ್ನ ಲೈಫಲ್ಲೇ ಸುಮ್ನೆನೂ ಇಸ್ಪೀಟು ಎಲೆಯನ್ನ ನೋಡಿಲ್ಲ. ಇನ್ನು ಕ್ಯಾಸಿನೋ ಏನ್ ನೋಡಲಿ. ಜಮೀರ್ ಗೆ ಮುಸ್ಲಿಂ ನಾಯಕನಾಗಬೇಕೆಂಬ ಆಸೆ. ಎಲ್ಲ ವಿಚಾರದಲ್ಲಿಯೂ ಮುಂದೆ ಬರಬೇಕು ಎಂದು ಬರುತ್ತಾರೆ. ಕೆಜೆ.ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲೂ ಅವರೇ ಕಾಣಿಸಿಕೊಳ್ಳುತ್ತಾರೆ. ಜಾಫರ್ ಷರೀಫ್ ನಂತರ ಲೀಡರ್ ಆಗಬೇಕು ಎಂಬ ಆಸೆ ಅವರಿಗಿದೆ. ವಿದೇಶಕ್ಕೆ ಹೋಗೋದು ತಪ್ಪಲ್ಲ. ಆದರೆ ಕ್ಯಾಸಿನೋ ವಿಚಾರದಲ್ಲಿ, ಹವಾಲಾ ನಡೆದಿದ್ದರೆ ತಪ್ಪಾಗುತ್ತೆ ಎಂದರು.
ಇದೇ ವೇಳೆ ಬಿಜೆಪಿಯಲ್ಲಿ ನಾಯಕ್ವದ ಬದಲಾವಣೆ ವಿಚಾರವಾಗಿ ಮಾತನಾಡಿ, ಮೈ ಕ್ಯಾಪ್ಟನ್ ಈಸ್ ಯಡಿಯೂರಪ್ಪ. ಯಾವುದೇ ಬಾಲ್ ಹಾಕಿದರೂ ಯಡಿಯೂರಪ್ಪ ಅರಾಮಾವಾಗಿ ಸಿಕ್ಸ್, ಫೋರ್ ಹೊಡೆಯುತ್ತಾರೆ. ಸ್ಪಿನ್ ಹಾಕಲಿ, ನೋಬಾಲ್ ಹಾಕಲಿ ಹೊಡೆಯುತ್ತಾರೆ. ಯಡಿಯೂರಪ್ಪ ಸೀಸನ್ ರಾಜಕಾರಣಿ, ಅಗ್ರಗಣ್ಯರು. ಅವರ ಅಗ್ರಗಣ್ಯ ಪದವಿ ಹಾಗೆ ಇರುತ್ತೆ. ಮೂರು ವರ್ಷ ಸಿಎಂ ಆಗಿಯೇ ಇರುತ್ತಾರೆ. ಬಿಜೆಪಿ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.