ಗದಗ: ಜಿಲ್ಲೆಯನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದು, ನೋಡ ನೋಡುತ್ತಿದ್ದಂತೆ ದೇವಸ್ಥಾನದ ಗೋಡೆ ಕುಸಿದು ಬಿದ್ದಿದೆ.
ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ದೇವಸ್ಥಾನದ ಗೋಡೆ ನೋಡ ನೋಡುತ್ತಲೇ ಕುಸಿದು ಬಿದ್ದಿದೆ. ಕಸಬಾ ಓಣಿಯ ಶಾಲಾ ಶ್ರೀಬಸವೇಶ್ವರ ದೇವಸ್ಥಾನದ ಗೋಡೆ ಕುಸಿತವಾಗಿದೆ. ಏಕಾಏಕಿ ಗೋಡೆ ಕುಸಿದಿದ್ದನ್ನು ಕಂಡು ಸ್ಥಳಿಯರು ಭಯಭೀತರಾಗಿದ್ದಾರೆ. ದೇವಸ್ಥಾನದ ಬಳಿ ಯಾರೂ ಇಲ್ಲದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಗೋಡೆ ಕುಸಿತವಾಗುವುದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಈ ನಿರಂತರ ಮಳೆಗೆ ನರಗುಂದ ತಾಲೂಕಿನಾದ್ಯಂತ ಒಂದುವಾರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಭಾರೀ ಮಳೆಯಿಂದಾಗಿ ಗೋಡೆಗಳು ತಂಪು ಹಿಡಿಯುತ್ತಿದ್ದು, ಹೀಗಾಗಿ ಮಣ್ಣಿನ ಗೋಡೆಯ ಮನೆಗಳು, ದೇವಸ್ಥಾನಗಳು, ಭವನಗಳು, ಕೋಟೆ ಗೋಡೆಗಳು, ವಿದ್ಯುತ್ ಕಂಬ, ಮರಗಳು ಧರೆಗೆ ಉರುಳುತ್ತಿವೆ. ವರುಣನ ಆರ್ಭಟದಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.