– ತಾಯಿ, ಮಗಳು ಪಾರು
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸಿದ್ದು, ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರೀ ಮಳೆಯಿಂದಾಗಿ ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯ ಯಜಮಾನ ರವಿಕುಮಾರ್ (42), ಮಗ ರಾಹುಲ್ (15) ಮೃತಪಟ್ಟಿದ್ದಾರೆ. ಮೃತ ರವಿಕುಮಾರ್ ಪತ್ನಿ ಮುನಿರಾಜಮ್ಮ ಹಾಗೂ ಮಗಳು ರುಚಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮನೆ ಕುಸಿತವಾಗುತ್ತಿದ್ದಂತೆ ನೆರೆ ಹೊರೆಯವರು ಗಮನಿಸಿದ್ದು, ತಕ್ಷಣವೇ ನಾಲ್ವರನ್ನೂ ಅವಶೇಷಗಳಿಂದ ಹೊರ ತೆಗೆದಿದ್ದಾರೆ. ಆದರೆ ಕೆಲಸ ವೇಗವಾಗದ ಹಿನ್ನೆಲೆ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೊನೆಗೆ ಸ್ಥಳಕ್ಕೆ ಬಂದ ಆಗ್ನಿಶಾಮಕ ದಳ ಸಿಬ್ಬಂದಿ ನಾಲ್ವರನ್ನು ಹೊರತೆಗೆದಿದ್ದಾರೆ. ಈ ವೇಳೆ ತಂದೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.