ಬೆಂಗಳೂರು: ಸಿಎಂ ಯಡಿಯೂರಪ್ಪನವರನ್ನ ಯಾವುದೇ ಕಾರಣಕ್ಕೆ ಬದಲಾವಣೆ ಮಾಡಬಾರದು ಎಂದು ರಾಜ್ಯದ ವೀರಶೈವ ಮಠಾಧೀಶರು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ನಿನ್ನೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈ ವೇಳೆ ಮಠಾಧೀಶರಿಗೆ ನೀಡಿದ್ದ ಕವರ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ಅವರ ಆಪ್ತ ಹಾಗೂ ಕೆ ಆರ್ ಡಿ ಸಿ ಎಲ್ ಅಧ್ಯಕ್ಷ ರುದ್ರೇಶ್, ಸಿಎಂ ಸ್ವಾಮೀಜಿಗಳ ಜೊತೆಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ನೆರೆದಿದ್ದ ಎಲ್ಲ ಸ್ವಾಮೀಜಿಗಳಿಗೆ ಒಂದೊಂದು ಸೀಲ್ಡ್ ಕವರ್ ನೀಡಿದ್ದಾರೆ. ಇದೀಗ ಈ ಕವರ್ ಸಂಗತಿ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದೆ. ಆ ಕವರ್ನಲ್ಲಿ ಏನಿತ್ತು.? ಎಂಬ ಚರ್ಚೆ ಸಾರ್ವಜನಿಕ ಕ್ಷೇತ್ರದಲ್ಲಿ ಆರಂಭವಾಗಿದೆ. ಈ ಹಿಂದೆಯೂ ಸ್ವಾಮೀಜಿಗಳಿಗೆ ಕವರ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಆದ್ರೆ ಈ ಬಾರಿ ಕವರ್ ಹಂಚಿರುವ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಮುಖಂಡ ರುದ್ರೇಶ್ ಅವರು ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಾಮೀಜಿಗಳಿಗೆ ಜೋಳಿಗೆಯಲ್ಲಿ ಗೌರವ ಸಮರ್ಪಣೆ ವಾಡಿಕೆಯಂತೆ ನಡೆದುಕೊಂಡು ಬಂದಿದ್ದರೂ ಸಿಎಂ ಬದಲಾವಣೆಯ ಚರ್ಚಾ ಸಮಯದಲ್ಲಿ ವೀರಶೈವ ಮಠಾಧೀಶರು ಒಕ್ಕೊರಲಿನಿಂದ ಬೆಂಬಲ ನೀಡಿರುವ ವಿಷಯ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕವರ್ ವಿಷಯ ಕೂಡ ಅನೇಕ ರೀತಿಯ ಅರ್ಥಗಳನ್ನ ಕಲ್ಪಿಸಿಕೊಡುವಂತಿದೆ. ಇದನ್ನೂ ಓದಿ:‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್ವೈ ಭಾವುಕ..!
ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆಗೆ ಹೈಕಮಾಂಡ್ ನ ಸೂಚನೆ ಹಿನ್ನೆಲೆ, ರಾಜ್ಯ ಬಿಜೆಪಿಯಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಇದೀಗ ವೀರಶೈವ ಮಠಾಧೀಶರು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಒತ್ತಡ ಹೇರಲಾಗುತ್ತಿದೆ. ನಿನ್ನೆ ಸಿಎಂ ಅಧಿಕೃತ ನಿವಾಸ, ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿ ಮಾಡಿದ್ದ ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಇದನ್ನೂ ಓದಿ: ಈಗ ಬಿಟ್ಟುಬಿಡಿ, ಮುಂದಿನ ವಾರ ಸಿಗೋಣ – ಕೈ ಮುಗಿದು ತೆರಳಿದ್ರು ಅರುಣ್ ಸಿಂಗ್