ಚಿಕ್ಕಮಗಳೂರು: ದೇಶಕ್ಕೆ ಜೈಕಾರ ಕೂಗೋದು ಬಿಜೆಪಿಯವರು ಮಾತ್ರ ಎಂದು ಅಂದುಕೊಂಡಿದ್ದರಿಂದ ಇಂದು ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೈ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೂ ಮುನ್ನ ಮಾತಾನಾಡಿದ ಅವರು, ಕಾಂಗ್ರೆಸ್ಸಿಗರು ಸಿದ್ಧಾಂತದ ಬದ್ಧತೆಗೆ ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಬೇಡಿ. ನೀವು ಬಿಜೆಪಿಯವರ ಯಾಕೆ ಹಾಗೇ ಕೂಗುತ್ತೀರಾ ಎಂದು ಕಾರ್ಯಕರ್ತರಿಗೆ ಗದರಿಸುತ್ತಾರೆ ಎಂದರು.
ದೇಶಕ್ಕೆ ಜೈಕಾರ ಹಾಕೋದು ಅವರ ದೃಷ್ಟಿಯಲ್ಲಿ ಬಿಜೆಪಿಯವರು ಮಾತ್ರ ಎಂದುಕೊಂಡರಿಂದ ಇಂದು ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ಸಿನವರು ಸೋತ ಕೂಡಲೇ ಇವಿಎಂ ಮೇಲೆ ಆರೋಪಿಸುತ್ತಾರೆ. ಆದರೆ ನಾವು ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತೇವೆ. ಪಕ್ಷದ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗಿಯಾಗುತ್ತೇವೆ. ನಾವು ಸಂಘಟನೆ ಕಟ್ಟಿ, ಪಕ್ಷ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಎಚ್. ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿರುವ ವಿಚಾರವಾಗಿ ಮಾತಾನಾಡಿದ ಅವರು, ನಾನು ತೀರ್ಪನ್ನು ಅಧ್ಯಯನ ಮಾಡಿಲ್ಲ. ಯಾವ ಹಿನ್ನೆಲೆ ತೀರ್ಪು ಬಂದಿದೆ ಎಂಬುದನ್ನು ನೋಡಿಲ್ಲ. ಕೋರ್ಟ್ ತೀರ್ಪಿನ ಅಧ್ಯಯನ ಬಳಿಕ ಪ್ರತಿಕ್ರಿಯೆ ನೀಡುವುದು ಸೂಕ್ತ. ಹೀಗಾಗಿ ತೀರ್ಪನ್ನು ಅಧ್ಯಯನ ಮಾಡದೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ತಿಳಿಸಿದರು.