ಪಾಟ್ನಾ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಪರಿಣಾಮ ದೇಶದ ಬಹುತೇಕ ನಗರದಲ್ಲಿ ಅನ್ನದಾತರು ರಸ್ತೆಗೆ ಇಳಿದಿದ್ದರು. ಪ್ರತಿಭಟನೆಯಿಂದಾಗಿ ಹಲವೆಡೆ ಟ್ರಾಫಿಕ್ ಉಂಟಾಗಿದ್ದರಿಂದ ವಧು ಎರಡು ಕಿಲೋ ಮೀಟರ್ ನಡೆದುಕೊಂಡು ದೇವಸ್ಥಾನ ತಲುಪಿದ್ದಾಳೆ. ರಸ್ತೆಯಲ್ಲಿ ವಧು ಕುಟುಂಬಸ್ಥರ ಜೊತೆ ಹೋಗ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ಬಿಹಾರದ ಸಮಸ್ತಿಪುರದ ಪಟೇಲ್ ಮೈದಾನದ ಬಳಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಪಾರ ಪ್ರಮಾಣದ ಜನ ಸೇರಿದ್ದರಿಂದ ಪಟೇಲ್ ಮೈದಾನ, ಫ್ಲೈ ಓವರ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲ ಧರಣಿ ನಿರತರು ರಸ್ತೆಯಲ್ಲಿ ಕುಳಿತಿದ್ದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು.
ಇದೇ ಮಾರ್ಗವಾಗಿ ಮನ್ನಿಪುರ ದೇವಾಲಯಕ್ಕೆ ವಧು ಮತ್ತು ಆಕೆಯ ಕುಟುಂಬಸ್ಥರು ಹೊರಟಿದ್ದರು. ಮದುವೆ ಮುಂಚಿನ ಶಾಸ್ತ್ರ, ವಿಶೇಷ ಪೂಜೆಯನ್ನ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಗಂಟೆಗಳೂ ಕಳೆದ್ರೂ ಟ್ರಾಫಿಕ್ ಕ್ಲಿಯರ್ ಆಗದ ಹಿನ್ನೆಲೆ ವಧುವಿನ ಜೊತೆ ಮೂವರು ಮಹಿಳೆಯರು ನಡೆದುಕೊಂಡು ಹೋಗಲು ತೀರ್ಮಾನಿಸಿದ್ದರು. ಅದರಂತೆ ವಾಹನದಿಂದ ಕೆಳಗಿಳಿದ ನಾಲ್ಕು ಜನರು ನಡೆದು ಹೋಗಿದ್ದಾರೆ.
ಸುಮಾರು ಎರಡು ಕಿಲೋ ಮೀಟರ್ ನಡೆದ ಬಳಿಕ ಮಹಿಳೆಯರಿಗೆ ಆಟೋ ಸಿಕ್ಕಿದೆ. ಕೊನೆಗೆ ವಧುವನ್ನ ಆಟೋದಲ್ಲಿ ಕಳುಹಿಸಿ, ಉಳಿದವರು ನಡೆದುಕೊಡೇ ದೇವಸ್ಥಾನ ತಲುಪಿದ್ದಾರೆ.