ಕೊಲಂಬೋ: ಶ್ರೀಲಂಕಾದ ಸಂಸತ್ತಿನಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣವನ್ನು ರದ್ದು ಮಾಡಲಾಗಿದೆ.
ಇಮ್ರಾನ್ ಖಾನ್ಗೆ ಭಾಷಣಕ್ಕೆ ಅನುಮತಿ ನೀಡಿದರೆ ಭಾರತದ ಜೊತೆಗಿನ ಉತ್ತಮ ಸಂಬಂಧ ಹಾಳಾಗಬಹುದು ಎಂಬ ಕಾರಣಕ್ಕೆ ಶ್ರೀಲಂಕಾ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಎಂದು ಶ್ರೀಲಂಕಾದ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈಗಾಗಲೇ ಶ್ರೀಲಂಕಾ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಭಾರತ ಶ್ರೀಲಂಕಾಗೆ 5 ಲಕ್ಷ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ.
ಅವಕಾಶ ನೀಡಿಲ್ಲ ಯಾಕೆ?
ಇಮ್ರಾನ್ ಈಗಾಗಲೇ ವಿಶ್ವದ ವೇದಿಕೆಯಲ್ಲಿ ಭಾರತ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಬಂದಿದ್ದಾರೆ. ಈ ನಡುವೆ ಶ್ರೀಲಂಕಾದಲ್ಲಿ ಭಾಷಣಕ್ಕೆ ಅನುಮತಿ ನೀಡಿದರೆ ಇಲ್ಲೂ ಭಾರತದ ವಿರುದ್ದ ಆರೋಪ ಮಾಡಿದರೆ ಭಾರತದ ಜೊತೆಗಿನ ಸಂಬಂಧ ಹಾಳಾಗಬಹುದು ಎಂಬ ಮಾತು ಕೇಳಿ ಬಂದಿತ್ತು.
ಈ ಕಾರಣದ ಜೊತೆ ಶ್ರೀಲಂಕಾದಲ್ಲಿ ಬೌದ್ಧರು ಮತ್ತು ಮುಸ್ಲಿಮರ ನಡುವೆ ಈಗ ಘರ್ಷಣೆಗಳು ನಡೆಯುತ್ತಿದೆ. ಭಾಷಣಕ್ಕೆ ಅವಕಾಶ ನೀಡಿದರೆ ಬೌದ್ಧ ಧರ್ಮದವರು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.