ನವದೆಹಲಿ: ಭಾರತದ ಕ್ರಿಕೆಟ್ ಮೇಲೆ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗಿಂತ ಮಿಸ್ಟರ್ ಡಿಪೆಂಡಬಲ್ ರಾಹುಲ್ ದ್ರಾವಿಡ್ ಅವರ ಪ್ರಭಾವವೇ ಹೆಚ್ಚು ಎಂದು ಬಿಜೆಪಿ ಸಂಸದ, ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ಎಂದಾಕ್ಷಣ ಎಲ್ಲರೂ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಮಾತನಾಡುತ್ತಾರೆ. ಆದರೆ ರಾಹುಲ್ ದ್ರಾವಿಡ್ ಅವರ ಪಾತ್ರ ಬಹಳ ಪ್ರಮುಖವಾದದ್ದು ಎಂದು ದ್ರಾವಿಡ್ ಕುರಿತು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್ಗೆ ನಾನು ಪಾದಾರ್ಪಣೆ ಮಾಡಿದ್ದೆ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದೆ. ಆದರೆ ಯಾರು ಕೂಡ ದ್ರಾವಿಡ್ ಅವರ ನಾಯಕತ್ವಕ್ಕೆ ಕ್ರೆಡಿಟ್ ನೀಡಲಿಲ್ಲ. ಕೇವಲ ಗಂಗೂಲಿ, ಧೋನಿ, ವಿರಾಟ್ ಕೊಹ್ಲಿ ಕುರಿತು ಮಾತ್ರ ಮಾತನಾಡುತ್ತಾರೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಅತ್ಯುತ್ತಮ ನಾಯಕರು ಎಂಬುವುದನ್ನು ಗ್ರಹಿಸಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ದ್ರಾವಿಡ್ ಅವರನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಯುವಂತೆ ಸೂಚಿದರು ಆಡುತ್ತಿದ್ದರು. ಅಲ್ಲದೇ ವಿಕೆಟ್ ಕೀಪಿಂಗ್, ಮ್ಯಾಚ್ ಫಿನಿಷರ್ ಆಗಿ ತಂಡಕ್ಕೆ ಅಗತ್ಯವಾದ ಸಮಯದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನ ದೃಷ್ಟಿಯಲ್ಲಿ ಭಾರತದ ಕ್ರಿಕೆಟ್ ಮೇಲೆ ರಾಹುಲ್ ದ್ರಾವಿಡ್ ಅವರ ಪ್ರಭಾವ ಹೆಚ್ಚು. ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಡಿದ್ದ ಪರಿಣಾಮ ಅವರಿಗೆ ಸಲ್ಲಬೇಕಾದ ಗೌರವ ಲಭಿಸಲಿಲ್ಲ ಎಂದು ಗಂಭೀರ್ ವಿವರಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ವಿವಾದ ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗಂಗೂಲಿ ತಂಡವನ್ನು ಅತ್ಯುತ್ತಮವಾಗಿ ರೂಪಿಸಿದ್ದರು. ಅನುಭವಿ ಆಟಗಾರರಾದ ಸಚಿನ್, ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಶ್ರೀನಾಥ್ ರಂತಹ ಆಟಗಾರ ನೆರವಿನಿಂದ ಸಾಕಷ್ಟು ಜಯಗಳನ್ನು ತಂಡಕ್ಕೆ ತಂದುಕೊಟ್ಟಿದ್ದರು. ಅಲ್ಲದೇ ಯುವ ಆಟಗಾರರಿಗೂ ಸೂಕ್ತ ಅವಕಾಶ ನೀಡಿದ್ದರು. 2003ರ ವಿಶ್ವಕಪ್ನಲ್ಲಿ ತಂಡವನ್ನು ಫೈನಲ್ವರೆಗೂ ಮುನ್ನಡೆಸಿದ್ದರು. ಗಂಗೂಲಿ ಬಳಿಕ ತಂಡದ ನಾಯಕತ್ವ ವಹಿಸಿಕೊಂಡ ದ್ರಾವಿಡ್, ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ತಂದಿದ್ದರು. ಆ ಬಳಿಕ 2006-07ರ ಅವಧಿಯಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಜಯ ಪಡೆದಿದ್ದರು. ಆದರೆ 2007ರ ವಿಶ್ವಕಪ್ ಸೋಲಿನಿಂದ ದ್ರಾವಿಡ್ ಅವರ ಗೆಲುವುಗಳಿಗೆ ಲಭಿಸಬೇಕಾದ ಸೂಕ್ತ ಗೌರವ ಲಭಿಸಲಿಲ್ಲ ಎಂದು ಹೇಳಿದ್ದಾರೆ.