ನವದೆಹಲಿ: ಕೊರೊನಾ ಸೋಂಕಿನಿಂದ ತತ್ತರಿಸಿರುವ ಜೊತೆಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಮತ್ತೊಂದು ಆತಂಕ ಶುರುವಾಗಿದ್ದು, ದೆಹಲಿಯಲ್ಲೀಗ ಭಯೋತ್ಪಾದನೆ ಭೀತಿ ಹೆಚ್ಚಾಗಿದೆ.
ಭಯೋತ್ಪಾದಕ ಚಟುವಟಿಕೆ ನಡೆಸಲು ಸಂಚು ಮಾಡಿರುವ ನಾಲ್ಕೈದು ಭಯೋತ್ಪಾದಕರು ದೆಹಲಿ ಪ್ರವೇಶಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ಜಮ್ಮು ಕಾಶ್ಮೀರದಿಂದ ದೆಹಲಿಯೊಳಗೆ ನುಸುಳಲು ಪ್ರಯತ್ನ ನಡೆದಿದೆ. ಭಯೋತ್ಪಾದಕರು ಬಸ್, ಕಾರು, ರೈಲು ಅಥವಾ ಟ್ಯಾಕ್ಸಿ ಮೂಲಕ ದೆಹಲಿ ಪ್ರವೇಶಿಸುವ ಸಾಧ್ಯತೆಗಳಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ಲ್ಯಾನ್ ನಡೆದಿದೆ. ಭಯೋತ್ಪಾದಕರು ದೆಹಲಿ ಪ್ರವೇಶ ಮಾಡಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯಗಳಿವೆ. ಹೀಗಾಗಿ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲು ಸೂಚನೆ ನೀಡಿದೆ.
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಬಸ್, ರೈಲು ನಿಲ್ದಾಣ ಸೇರಿದಂತೆ ಗಡಿಯಲ್ಲಿ ವಾಹನ ತಪಾಸಣೆ ಹೆಚ್ಚು ಮಾಡಲಾಗಿದೆ.