ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳನ್ನು ಖರೀದಿಸುವ ಸಂಬಂಧವಾಗಿ ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟದ ಉಪಸಮಿತಿಯ ಸಭೆ ನಡೆಯಿತು. ಸಚಿವರಾದ ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಪ್ರಭು ಚೌವಾಣ್, ಗೋಪಾಲಯ್ಯ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಹನುಮನಗೌಡ ಬೆಳಗುರ್ಕಿ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ನಿರ್ಧಾರಗಳು
ಭತ್ತ ಖರೀದಿ: 2020-21 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತ ಖರೀದಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಈ ಕೆಳಗಿನಂತೆ ನಿರ್ಧರಿಸಲಾಯಿತು.
Advertisement
ಈ ಸಾಲಿನಲ್ಲಿ ಕೇಂದ್ರ ಸರ್ಕಾರವು 1,10 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿ ಮಾಡಲು ಅನುಮತಿ ನೀಡಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಪ್ರಮಾಣಕ್ಕೆ ಅಂದರೆ ಒಟ್ಟು ಸುಮಾರು 2.10 ಲಕ್ಷ ಟನ್ ನಷ್ಟು ಭತ್ತವನ್ನು ಖರೀದಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಯಿತು.
Advertisement
Advertisement
ಭತ್ತ ಖರೀದಿಗಾಗಿ ರೈತರ ನೋಂದಣಿ ಈಗಾಗಲೇ ಆರಂಭಿಸಿದ್ದು, ಖರೀದಿ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ನಿರ್ಧರಿಸಲಾಯಿತು. ರೈತರ ನೋಂದಣಿಯನ್ನು ಜನವರಿ ಅಂತ್ಯದವರೆಗೂ ಮುಂದುವರೆಸುವಂತೆ ತೀರ್ಮಾನಿಸಲಾಯಿತು.
Advertisement
ಭತ್ತ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್ ನಿಗದಿಪಡಿಸುವಂತೆ ತೀರ್ಮಾನಿಸಲಾಯಿತು.
ಬೆಲೆ ಎಷ್ಟು?
ಭತ್ತ ಸಾಮಾನ್ಯ: 1868 ರೂ. (ಪ್ರತಿ ಕ್ವಿಂಟಾಲ್ ಗೆ)
ಭತ್ತ ಗ್ರೇಡ್ ಎ: 1888 ರೂ. (ಪ್ರತಿ ಕ್ವಿಂಟಾಲ್ ಗೆ)
ರಾಗಿ ಮತ್ತು ಬಿಳಿಜೋಳ:
ರಾಗಿ ಮತ್ತು ಬಿಳಿಜೋಳ ಖರೀದಿಗಾಗಿ ರೈತರ ನೋಂದಣಿಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಹಾಗೂ ಖರೀದಿಯನ್ನು ಇದೇ ಡಿಸೆಂಬರ್15 ರಿಂದ ಆರಂಭಿಸಲು ನಿರ್ಧರಿಸಲಾಯಿತು. ರಾಗಿ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ ಪ್ರತಿ ರೈತರಿಂದ 50 ಮಿತಿ ಕ್ವಿಂಟಾಲ್ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ತೀರ್ಮಾನಿಸಲಾಗಿದೆ.
ರಾಗಿ ಖರೀದಿ ಪ್ರಮಾಣದ ಒಟ್ಟು ಗುರಿಯನ್ನು ಈಗಿರುವ 3 ಲಕ್ಷ ಮೆಟ್ರಿಕ್ ಟನ್ ಜೊತೆಗೆ ಇನ್ನೂ 1ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಪ್ರಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಬಿಳಿಜೋಳ ಖರೀದಿಗೆ ಮುಂಗಾರು ಪ್ರಮಾಣ 4000 ಮೆಟ್ರಿಕ್ ಟನ್ ಈಗಾಗಲೇ ನಿಗದಿಯಾಗಿದ್ದು, ಇದನ್ನು 1 ಲಕ್ಷ ಮೆಟ್ರಿಕ್ ಟನ್ ಗೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಬಿಳಿಜೋಳ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್ ಮಿತಿ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ತೀರ್ಮಾನಿಸಲಾಯಿತು.
ಬೆಲೆ ಎಷ್ಟು?
ರಾಗಿ: ರೂ. 3295 (ಪ್ರತಿ ಕ್ವಿಂಟಾಲ್ ಗೆ)
ಬಿಳಿ ಜೋಳ ಹೈಬ್ರಿಡ್: 2,620 ರೂ. (ಪ್ರತಿ ಕ್ವಿಂಟಾಲ್ ಗೆ)
ಬಿಳಿ ಜೋಳ ಮಾಲ್ದಂಡಿ: 2,640 ರೂ. (ಪ್ರತಿ ಕ್ವಿಂಟಾಲ್ ಗೆ)
ತೊಗರಿ:
ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿ ಖರೀದಿಗೆ ರೈತರ ನೊಂದಣೆಯನ್ನು ಡಿಸೆಂಬರ್ 15 ರಿಂದ ಪ್ರಾರಂಭಿಸಲು ಮತ್ತು ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಲು ನಿರ್ಧರಿಸಲಾಯಿತು. ಖರೀದಿ ಅವಧಿ 90 ದಿನಗಳು. ಪ್ರತಿ ಎಕರೆಗೆ ಗರಿಷ್ಟ 7.5 ಕ್ವಿಂಟಾಲ್ ಮತ್ತು ಗರಿಷ್ಟ ಒಟ್ಟು 20 ಕ್ವಿಂಟಾಲ್ ವರೆಗೆ ಒಬ್ಬ ರೈತರಿಂದ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ಗೆ 6 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ.
ಹೆಸರುಕಾಳು:
ಕಳೆದ 14 ಸೆಪ್ಟೆಂಬರ್ 2020 ರಿಂದಲೇ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಆವಕಗಳು ಬಂದಿರುವುದಿಲ್ಲ. ಆದರೂ ರೈತರಿಗೆ ಮುಂದೆ ಅನುಕೂಲ ಕಲ್ಪಿಸಲು ಪ್ರತಿ ರೈತರಿಂದಲೂ ಗರಿಷ್ಟ 20 ಕ್ವಿಂಟಾಲ್ ವರೆಗೆ ಖರೀದಿಸಲು ನಿರ್ಧಾರಿಸಲಾಯಿತು. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.
ಉದ್ದು:
ಉದ್ದಿನ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದರೂ ಹೆಚ್ಚಿನ ಆವಕಗಳು ಬಂದಿರುವುದಿಲ್ಲ. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.
ಶೇಂಗಾ:
ಶೇಂಗಾ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, 173 ರೈತರು ಮಾತ್ರ ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ಗೆ 5,275 ರೂ. ದರವನ್ನು ನಿಗದಿ ಮಾಡಲಾಗಿದೆ.