ಬೆಂಗಳೂರು: ಬಸವರಾಜ ಬೊಮ್ಮಾಯಿ ಜನತಾದಳದ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊಸ ಸಿಎಂ ಬೊಮ್ಮಾಯಿ ಅವರಿಗೆ ಅನುಭವವಿದೆ. ಬಿಜೆಪಿಯಿಂದ ಆಯ್ಕೆ ಆಗಿದ್ದರೂ ಜನತಾದಳದವರೇ ಮುಖ್ಯಮಂತ್ರಿಗಳು ಆಗಿದ್ದಾರೆ ಎಂಬ ಭಾವನೆ ನಮಗೆ ಇದೆ. ಈಗಲೂ ಬೊಮ್ಮಾಯಿ ನಮಗೆ ಸ್ನೇಹಿತರು, ಒಳ್ಳೆ ಹಿತೈಷಿಗಳು. ಅವರು ಉತ್ತಮವಾಗಿ ಕೆಲಸ ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.
ಯಡಿಯೂರಪ್ಪನವರಿಗೆ ಮಾಡಿದ ರೀತಿ ಬೊಮ್ಮಾಯಿ ಅವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡದೇ ಇರಲಿ. ಕೇಂದ್ರ ಸರ್ಕಾರ ಯಡಿಯೂರಪ್ಪನವರಿಗೆ ಸರಿಯಾದ ಸಹಕಾರ ನೀಡಲಿಲ್ಲ. ಯಡಿಯೂರಪ್ಪರನ್ನ ಸಿಎಂ ಅಂತ ಭಾವನೆ ಮೂಡುವುದಕ್ಕೂ ಕೇಂದ್ರದ ನಾಯಕರು ಅವಕಾಶ ಕೊಡಲಿಲ್ಲ. ಬೊಮ್ಮಾಯಿ ಅವರನ್ನು ಈಗ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುವುದು ಬೇಡ ಎಂದರು.
ಸರಿಯಾದ ಸಹಕಾರ, ಅನುದಾನವನ್ನು ಬೊಮ್ಮಾಯಿ ಅವರಿಗೆ ನೀಡಬೇಕು. ರಾಜ್ಯದ ಬೇಡಿಕೆ, ಇಲಾಖೆ ಹಣ, ಜಿಎಸ್ಟಿ ಹಣ ಸರಿಯಾಗಿ ರಾಜ್ಯಕ್ಕೆ ನೀಡಿ ಬೊಮ್ಮಾಯಿಗೆ ಕೇಂದ್ರ ಸಹಕಾರ ನೀಡಲಿ. ಯಾರ ಹಿಡಿತಕ್ಕೆ ಬೊಮ್ಮಾಯಿ ಅವರು ಒಳಗಾಗೋದು ಬೇಡ ಎಂದು ಹೇಳಿದರು.ಇದನ್ನೂ ಓದಿ:ನನ್ನನ್ನು ಬಿಟ್ಟು ಕ್ಯಾಬಿನೆಟ್ ಮಾಡಲ್ಲ – ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಕತ್ತಿ ಲಾಬಿ
ಬಸವರಾಜ್ ಬೊಮ್ಮಾಯಿ ಅವರಿಗೆ ನೀರಾವರಿ ಸಚಿವರಾಗಿ ತುಂಬಾ ಅನುಭವ ಇದೆ. ಈ ಮೂರು ಯೋಜನೆ ಪರವಾಗಿ ರಾಜ್ಯದ ಪರವಾಗಿ ಕೇಂದ್ರ ನಿರ್ಧಾರ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದ ಜನರ ಜೊತೆ ಚೆಲ್ಲಾಟ ಆಡುತ್ತಿದೆ. ಹೀಗಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡುತ್ತಿದ್ದೇವೆ ಎಂದರು.
ಇಂದು ಮೊದಲ ಹಂತದಲ್ಲಿ ರಾಜ್ಯಪಾಲರಿಗೆ ಮನವಿ ಕೊಡುತ್ತೇವೆ. ಪ್ರಧಾನಿ ಅವರಿಗೂ ಪತ್ರವನ್ನು ಕಳಿಸುತ್ತೇವೆ. ಕೇಂದ್ರ ಸರ್ಕಾರದ ಸ್ಪಂದನೆ ಮೇಲೆ ಮುಂದಿನ ತೀರ್ಮಾನ ಮಾಡುತ್ತೇವೆ. ನಿರಂತರವಾಗಿ ನಮ್ಮ ಹೋರಾಟ ರಾಜ್ಯದ ನೀರಾವರಿ ಪರ ಇರುತ್ತೆ. ಯಾವುದೇ ಕಾರಣಕ್ಕೂ ಇದನ್ನ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ನಾಡಿನ ನೀರಾವರಿ ವಿಚಾರದಲ್ಲಿ, ಉತ್ತರ ಕರ್ನಾಟಕ ಭಾಗಕ್ಕೆ ಮತ್ತು ಯುಕೆಪಿ ಯೋಜನೆಗೆ ದೇವೇಗೌಡರ ಕೊಡುಗೆ ಅಪಾರ. ಯಾವುದೇ ಪಕ್ಷಗಳಿಂದ ಅದನ್ನ ಮಾಡಲು ಆಗಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ ಆಗುತ್ತಿದೆ. ಜನರಿಗೆ ಇದನ್ನ ಎಚ್ಚರಿಸುವ ಕೆಲಸ ಮಾಡುತ್ತೇವೆ. ಹೀಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:ನನ್ನ ಪ್ರೀತಿಯ ಊರು ಹುಬ್ಬಳ್ಳಿ : ಸಿಎಂ ಬೊಮ್ಮಾಯಿ