ಬಾಗಲಕೋಟೆ: ಕೋವಿಡ್-19 ಕರ್ತವ್ಯಕ್ಕೆ ಆಗಮಿಸುವ ವೇಳೆ ಬೈಕ್ನಿಂದ ಬಿದ್ದ ಅಂಗನವಾಡಿ ಕಾರ್ಯಕರ್ತೆ ಮೃತಟಪಟ್ಟ ಘಟನೆ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ನಡೆದಿದೆ.
ನಂದಿಕೇಶ್ವರ ಗ್ರಾಮದ ಪ್ರಭಾವತಿ ಪೂಜಾರಿ (52) ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆ. ಪ್ರಭಾವತಿ ಅವರು ಬಾದಾಮಿ ಪಟ್ಟಣದಲ್ಲಿ ಮನೆ ಮಾಡಿ ಕೊಂಡಿದ್ದರು. ನಿತ್ಯವೂ ಕೆಲಸಕ್ಕಾಗಿ ನಂದಿಕೇಶ್ವರ ಗ್ರಾಮಕ್ಕೆ ಬರುತ್ತಿದ್ದರು. ಮೇ 18ರಂದು ನಂದಿಕೇಶ್ವರ ಗ್ರಾಮಕ್ಕೆ ಬೈಕ್ನಲ್ಲಿ ತೆರಳುವ ವೇಳೆ ಮೂರ್ಛೆ ಹೋಗಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಕೋವಿಡ್-19 ಕೆಲಸದ ವೇಳೆ ಮೃತಪಟ್ಟ ಹಿನ್ನೆಲೆ ಪರಿಹಾರ ನೀಡುವಂತೆ ನಂದಿಕೇಶ್ವರ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.