ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ನಾಡದೋಣಿ ದುರಂತದ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಕೊಡೇರಿ ದೋಣಿ ದುರಂತ ಸ್ಥಳದ ಒಂದೆರಡು ಕಿಲೋಮೀಟರ್ ಆಸುಪಾಸಿನಲ್ಲಿ ಮೃತದೇಹ ಪತ್ತೆಯಾಗಿದೆ.
ನಾಲ್ವರು ಮೀನುಗಾರರಾದ ಬಿ.ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹಗಳು ಸಮುದ್ರ ಕಿನಾರೆಯಲ್ಲಿ ಸಿಕ್ಕಿದೆ. ಭಾನುವಾರ ಮಧ್ಯಾಹ್ನ ಕಸುಬು ನಡೆಸಿ ವಾಪಸ್ಸಾಗುವಾಗ ನಾಡದೋಣಿ ಬಂಡೆಗೆ ಡಿಕ್ಕಿಯಾಗಿ ಕಣ್ಮರೆಯಾಗಿದ್ದರು. ಸೋಮವಾರ ಬೆಳಗ್ಗೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಳಿಯ ನಾಗೂರಿನಲ್ಲಿ ನಾಗ ಖಾರ್ವಿ ಮೃತದೇಹ ಪತ್ತೆಯಾಗಿತ್ತು.
ರಾತ್ರಿ ಆದ್ರಗೋಳಿಯಲ್ಲಿ ಲಕ್ಷ್ಮಣ ಖಾರ್ವಿ ಮತ್ತು ಶೇಖರ ಖಾರ್ವಿ ಅವರ ಮೃತದೇಹಗಳು ಕಂಡುಬಂದಿವೆ. ನಂತರ ಮಂಜುನಾಥ ಖಾರ್ವಿ ಮೃತದೇಹ ಕೂಡ ಗಂಗೆಬೈಲು ಎಂಬಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕೋಸ್ಟ್ ಗಾರ್ಡ್, ನುರಿತ ಮುಳುಗು ತಜ್ಞರ ನೆರವು ಪಡೆದರೂ ನಾಪತ್ತೆಯಾದ ಮೀನುಗಾರರಲ್ಲಿ ಮೂವರ ಸುಳಿವು ಸಿಕ್ಕಿರಲಿಲ್ಲ. ಸಮುದ್ರದ ಅಲೆಗಳು ತೀವ್ರಗೊಂಡಿರುವುದು ಕಾರ್ಯಾಚರಣೆಯೂ ಹಿನ್ನಡೆಯಾಗಿತ್ತು. ಆಗ ಡ್ರೋನ್ ಮೊರೆ ಹೋಗಲಾಗಿತ್ತು.
ಈ ವೇಳೆ ಡ್ರೋನ್ ಕ್ಯಾಮೆರಾವು ಕೊಡೇರಿ ಅಳಿವೆ ಬಾಗಿಲಿನಿಂದ ಸುಮಾರು ಅರ್ಧ ಕಿ.ಮೀ. ಒಳಗೆ ಶವವೊಂದು ತೇಲುತ್ತಿರುವ ಛಾಯಾಚಿತ್ರವನ್ನು ಸೆರೆ ಹಿಡಿದಿತ್ತು. ಅದು ಶೇಖರ ಖಾರ್ವಿ ಅವರದ್ದಾಗಿದ್ದು, ದುರ್ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಸಮುದ್ರ ತೀರಕ್ಕೆ ಮೃತದೇಹ ತೇಲಿ ಬಂದಿದೆ. ಸರ್ಕಾರ ಶೀಘ್ರ ಪರಿಹಾರ ಕೊಡಬೇಕು, ಮೀನುಗಾರರ ಸುರಕ್ಷತಾ ಕ್ರಮ ಕಡ್ಡಾಯ ಮಾಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.