ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಅರೆಶಿರೂರು ರವಿ ಶೆಟ್ಟಿ ಅವರ ಮನೆಯ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ.
ಕರ್ನಾಟಕ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಅವರ ಮನೆಯ ಅಡಿಕೆ ತೋಟಕ್ಕೆ ಹೆಬ್ಬಾವು ಲಗ್ಗೆ ಇಟ್ಟಿತ್ತು. ಸಾಕಿದ ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಾರೆ. ಸುಮಾರು 20 ಅಡಿ ಉದ್ದ 50 ಕೆಜಿಯಷ್ಟು ಭಾರ ಇರುವ ಹಾವಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಹಿಡಿಯಲಾಗಿದೆ.
ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರಾಜೀವ ಎಸ್ ಗೌಡರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ದೊಡ್ಡಗಾತ್ರದ ಹಾವನ್ನು ಒಬ್ಬರಿಂದ ಎತ್ತಿ ಹಿಡಿಯುವುದು ಆಗದಿದ್ದಾಗ ಅರಣ್ಯ ಇಲಾಖೆಯವರಿಗೆ ತಿಳಿಸಿದ ತಕ್ಷಣ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರಾದ ರಾಜೀವ್ ಎಸ್ ಗೌಡರು ಮತ್ತು ಸಹಾಯಕರಾದ ನಾರಾಯಣ ಗೌಡರು ಆಗಮಿಸಿ ಸಹಕರಿಸಿದರು.
ಎರಡು ನಿಮಿಷ ಕಳೆದಿದ್ದರು ಹಾವು ನಾಯಿಯನ್ನು ನುಂಗುತ್ತಿತ್ತು. ಅಕ್ಕಪಕ್ಕದ ಮನೆಯವರು ಮತ್ತು ಮಕ್ಕಳು ಓಡಾಡುವ ಸ್ಥಳ ಆಗಿರುವುದರಿಂದ ಹಾವನ್ನು ಜಾಗರೂಕತೆಯಿಂದ ಹಿಡಿದು ಅರಣ್ಯ ಇಲಾಖೆ ಸಹಾಯ ಪಡೆದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ. ಹೆಬ್ಬಾವು ಹಿಡಿಯುವುದು ತಕ್ಷಣಕ್ಕೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ರವಿ ಶೆಟ್ಟಿ ಹೇಳಿದ್ದಾರೆ.