ಹಾಸನ: ವಿಶ್ವ ವಿಖ್ಯಾತ ಹಾಗೂ ಶಿಲ್ಪ ಕಲೆಗೆ ಹೆಸರು ಮಾಡಿರುವ ದೇಶ ವಿದೇಶದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಬೇಲೂರಿನ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದ ಬಾಗಿಲನ್ನು ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸೋಮವಾರ ತೆರೆದು ಭಕ್ತರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಈ ಸಂದರ್ಭ ಹಾಜರಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯಲ್ಲತಾ ದ್ವಾರಬಾಗಿಲಿಗೆ ಪೂಜೆ ಸಲ್ಲಿಸಿದರು. ಆ ನಂತರ ಚೆನ್ನಕೇಶವ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕರು ದೇವರ ದರ್ಶನ ಪಡೆದು, ಅರ್ಚಕ ಸಮೂಹವನ್ನು ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಕೊರೊನಾ ಒಂದು ಮತ್ತು ಎರಡನೇ ಅಲೆ ಕಾರಣದಿಂದ ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು. ಇದೀಗ ಕೊರೊನಾ ಪ್ರಕರಣ ಇಳಿಮುಖ ಕಂಡಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ದೇಗುಲಕ್ಕೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುದನ್ನು ಮರೆಯಬಾರದು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ, ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಆದರೆ ದಾಸೋಹದ ವ್ಯವಸ್ಥೆಗೆ ಸರ್ಕಾರದಿಂದ ಆದೇಶ ಬರಬೇಕಿದೆ. ದೇಗುಲಕ್ಕೆ ಬರುವ ಭಕ್ತರು ಕೊರೊನಾ ನಿಯಮ ಪಾಲಿಸಬೇಕೆಂದರು. ಆಗಮಿಕ ಅರ್ಚಕರಾದ ಕೃಷ್ಣ ಸ್ವಾಮಿ ಭಟ್ಟರ್, ಶ್ರೀನಿವಾಸ ಭಟ್ಟರ್ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿ ದೇವರ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ:ರಾಜಕೀಯಕ್ಕೆ ನಾನು ಬರಲ್ಲ – ಸಂಘವನ್ನು ವಿಸರ್ಜಿಸಿದ ರಜನಿಕಾಂತ್