ಮಂಡ್ಯ: ಕಳೆದ ಒಂದುವರೆ ತಿಂಗಳಿಂದ ಸಾಕಷ್ಟು ವಿವಾದ ಮೂಡಿಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.
ಬೇಬಿ ಬೆಟ್ಟದ ಸಿದ್ಧಲಿಂಗೇಶ್ವರ ಕ್ರಷರ್ ಸಮೀಪ ಸ್ಫೋಟಕ ವಸ್ತಗಳು ಪತ್ತೆಯಾಗಿವೆ. ಕಳೆದ ಒಂದೂವರೆ ತಿಂಗಳಿನಿಂದ ಬೇಬಿ ಬೆಟ್ಟದ ಗಣಿಗಾರಿಕೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಬ್ಲಾಸ್ಟಿಂಗ್ ಮೂಲಕ ಗಣಿಗಾರಿಕೆ ಮಾಡುತ್ತಿಲ್ಲ ಎಂದು ಗಣಿ ಮಾಲೀಕರು ಹಾಗೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಇದೀಗ ಈ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳಿಗ ಕಾರಣವಾಗಿದೆ. ಕಳೆದ ಜುಲೈ 16 ರಂದು ಕೆಆರ್ಎಸ್ ಸರಹದ್ದಿನಲ್ಲೂ ಸಹ ಸ್ಫೋಟಕಗಳು ಪತ್ತೆಯಾಗಿದ್ದವು.
ಇಂದು ಪತ್ತೆಯಾಗಿರುವ ಸ್ಫೋಟಕಗಳ ಪೈಕಿ 11 ಡಿಟೋನೇಟರ್, 20 ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿವೆ. ಪತ್ತೆಯಾಗಿರುವ ಸ್ಫೋಟಕಗಳನ್ನು ಪಾಂಡವಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣಗಳು ಪದೇ ಪದೇ ಬೇಬಿ ಬೆಟ್ಟದಲ್ಲಿ ಬೆಳಕಿಗೆ ಬರುತ್ತಿರುವ ಕಾರಣ ಬೆಟ್ಟದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆಯನ್ನು ನಿಷೇಧ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!