ಕೋಲಾರ: ಮಾವಿನ ತೋಟದಲ್ಲಿ ರಾತ್ರಿ ಕಾವಲಿಗೆ ಕೋವಿ ಇಟ್ಟುಕೊಂಡು ಕಾವಲಿದ್ದವನು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಬಳಿ ಮಾವಿನ ತೋಟದಲ್ಲಿ ನಡೆದಿದೆ.
ಕಾವಲು ಗಾರ ಕೊಲೆಯಾದನೆ ಅಥವಾ ಬೇಟೆಯಾಡಲು ಹೋಗಿ ತಾನೇ ಬೇಟೆಯಾದನೆ ಎಂಬ ಹಲವು ಪ್ರಶ್ನೆಗಳು ಎದ್ದಿವೆ. ತಲೆಗೆ ಬಂದೂಕಿನಿಂದ ಹೊಡೆದ ಪರಿಣಾಮ ಸತ್ತು ಬಿದ್ದಿದ್ದಾನೆ. ಶಂಕರ (45) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಸೀಗೆಹಳ್ಳಿ ಗ್ರಾಮದ ರವಿ ಅವರ ಮಾವಿನ ತೋಟದಲ್ಲಿ ರಾತ್ರಿ ಕಾವಲು ಕಾಯುವ ಕೆಲಸ ಮಾಡುತಿದ್ದ. ಆದರೆ ನಿನ್ನೆ ಮುಂಜಾನೆ ಆರು ಗಂಟೆಗೆ ಶವವಾಗಿ ಪತ್ತೆಯಾಗಿದ್ದಾನೆ.
ತನ್ನದೇ ಕೈಯಲ್ಲಿದ್ದ ಕೋವಿಯಿಂದ ತಲೆಗೆ ಸರಿಯಾಗಿ ಗುಂಡೇಟು ಬಿದ್ದಿದ್ದು ಮೆದುಳು ಕೂಡ ಹೊರಬಿದ್ದು, ಭೀಕರವಾಗಿ ಮೃತಪಟ್ಟಿದ್ದಾನೆ. ಪ್ರಾಣಿ ಭೇಟೆಯಾಡಲು ಹೋಗಿದ್ದ ಕೋವಿ ಮಾಲೀಕ ಕೋದಂಡಪ್ಪ ಜೊತೆಗೆ ಶ್ರೀನಿವಾಸಗೌಡ ಮತ್ತು ಚೌಡಪ್ಪ ಎಂಬುವರಿದ್ದು, ರಾತ್ರಿ ನಡೆಯಬಾರದ್ದು ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಶಂಕರಪ್ಪನ ತಲೆಗೆ ನೇರವಾಗಿ ಗುಂಡೇಟು ತಗಿಲಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಕೋವಿಯ ಮಾಲೀಕ ಕೋದಂಡಪ್ಪ ಆಗಿದ್ದು, ಮೃತನ ಕೈಗೆ ಕೋವಿ ಏಕೆ ಕೊಟ್ಟಿದ್ದರು ಎಂಬುದು ಕೂಡ ಪ್ರಶ್ನೆಯಾಗಿದೆ.
ಗ್ರಾಮಸ್ಥರಲ್ಲಿ ಕೆಲವರು ಹೇಳುವ ಪ್ರಕಾರ ಮಿಸ್ ಆಗಿ ಗುಂಡೇಟು ಆತನ ತಲೆಗೆ ಬಿದ್ದಿದೆ, ಅವನ ಮೇಲೆ ವೈಷಮ್ಯ ಯಾರಿಗೂ ಇರಲಿಲ್ಲ. ಇದು ಕೊಲೆಯಲ್ಲ ಆಕಸ್ಮಿಕ ಆಗಿರಬಹುದು ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಶ್ರೀನಿವಾಸಪುರ ಪೋಲೀಸರು ಘಟನೆ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ನಾಲ್ವರನ್ನು ವಿಚಾರಣೆ ನಡೆಸುತಿದ್ದಾರೆ.