– ಸುಭಾಷ್ ಢವಳೇಶ್ವರ ಉಪಾಧ್ಯಕ್ಷ
ಬೆಳಗಾವಿ: ಚುನಾವಣೆಯಲ್ಲಿ ಕೆಲವು ನಿರ್ದೇಶಕರು, ಬ್ಯಾಂಕ್ ನೌಕರರ ಸಂಘದ ವಿರೋಧದ ನಡುವೆಯೂ ಬೆಳಗಾವಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ್ ಕತ್ತಿ ಅಯ್ಕೆಯಾಗಿದ್ದಾರೆ.
ರಾಜ್ಯದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ್ ಕೂಡ ಒಂದಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಇದರ ನಡುವೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ್ ಕತ್ತಿ ಮತ್ತು ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಡಿಸಿಎಂ ಲಕ್ಷ್ಮಣ ಸವದಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಇರುವುದರಿಂದ ಬ್ಯಾಂಕ್ ಚುನಾವಣೆ ಆಗಬಾರದು. ಒಮ್ಮತದಿಂದ ಅವಿರೋಧ ಆಯ್ಕೆ ಆಗಬೇಕು ಎಂದು ಬಿಜೆಪಿ ವರಿಷ್ಠರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಹದಿನಾಲ್ಕು ನಿರ್ದೇಶಕರನ್ನು ಮುಂದುವರಿಸಬೇಕು. ಚುನಾವಣೆ ಆದರು ಕೂಡ ವರಿಷ್ಠರು ಹೇಳಿದಂತೆ ಹದಿನಾಲ್ಕು ಜನರನ್ನ ಉಳಿಸುವುದರಲ್ಲಿ ಸಫಲರಾಗಿದ್ದೇವೆ. ನಿನ್ನೆ ರಾತ್ರಿ ಒಂದು ಸುತ್ತಿನ ಸಭೆ ನಡೆಸಿ ಅಧ್ಯಕ್ಷರ ಆಯ್ಕೆ ಮಾಡುವ ತೀರ್ಮಾನವಾಗಿದೆ. ರಮೇಶ್ ಕತ್ತಿ ಅಧ್ಯಕ್ಷ ಮತ್ತು ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ನಮ್ಮಲ್ಲಿ ಭಿನ್ನಾಭಿಪ್ರಾಯ ಬರುವುದಿಲ್ಲ. ಎಲ್ಲರೂ ಒಟ್ಟಿಗೆ ಇರುವುದರಿಂದ ಉತ್ತರ ಕರ್ನಾಟಕದಿಂದ ಬಿಜೆಪಿಗೆ ಒಳ್ಳೆ ಸಂದೇಶ ಹೋಗಿದೆ. ಆಡಳಿತ ಮಂಡಳಿ ಸದಸ್ಯ, ನೌಕರನ್ನ ಗಣನೆಗೆ ತೆಗೆದುಕೊಂಡು ಕೆಲಸ ಮಾಡುವಂತೆ ರಮೇಶ್ ಕತ್ತಿಗೆ ಹೇಳಿದ್ದೇವೆ. ನಿರ್ದೇಶಕರು ಬಂದು ಅಭಿಪ್ರಾಯ ಹೇಳುವುದಕ್ಕೆ ಭಿನ್ನಮತ ಎಂದು ಹೇಳಲು ಆಗುವುದಿಲ್ಲ. ನ.21 ರಂದು ಬ್ಯಾಂಕ್ ಆಡಳಿತ ಮಂಡಳಿ ಸಭೆ ಕರೆಯುತ್ತೇವೆ. ಹಿಂದೆ ಆಗಿರುವಂತೆ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಬೆಳಗಾವಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.