ಧಾರವಾಡ/ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ನೂರು, ನೂರೈವತ್ತು, ಇನ್ನೂರರ ಗಡಿ ಸಮೀಪ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ಕೂಡ ಕೊರೊನಾ ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಹೀಗಾಗಿ ಸೊಂಕಿತರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ಐಸೋಲೇಷನ್ ಆಗುವಂತೆ ಆಗಿದೆ.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಹೆಚ್ಚಳ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಪ್ರಸ್ತುತವಾಗಿ ಸೋಂಕಿತರಿಗೆ ಯಾವುದೇ ವ್ಯವಸ್ಥೆ ಕೂಡ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆ ಇಲ್ಲದೇ ಸೊಂಕಿತರು ಪರದಾಡುತ್ತಿದ್ದಾರೆ. ಇದೇ ರೀತಿ ಹುಬ್ಬಳ್ಳಿಯ ನವನಗರದ ಅಧ್ಯಾಪಕ ನಗರದ 53 ವರ್ಷದ ಇಂಜಿನೀಯರರೊಬ್ಬರಿಗೆ ಸೋಂಕು ದೃಡಪಟ್ಟು ನಾಲ್ಕು ದಿನವಾದರೂ ಆಸ್ಪತ್ರೆಗೆ ದಾಖಲಿಸಿಲ್ಲ. ಆಸ್ಪತ್ರೆಗೆ ದಾಖಲಿಸಿ ಅಂತ ಸೋಂಕಿತರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಪದೇ ಪದೇ ಫೋನ್ ಮಾಡಿದ ನಂತರವೂ ದಾಖಲಿಸದೇ ಮನೆಯಲ್ಲಿ ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಯಲ್ಲಿ ಬೆಡ್ ಗಳಿಲ್ಲ. ವ್ಯವಸ್ಥೆ ಸರಿಯಿಲ್ಲವೆಂದು ಜಿಲ್ಲಾಡಳಿತದ ಕಚೇರಿಯ ಸಿಬ್ಬಂದಿಗಳು ಸೊಂಕಿತರಿಗೆ ಹೇಳಿದ್ದಾರೆ.
ಹೀಗಾಗಿ ಅನಿವಾರ್ಯವಾಗಿ ಸೋಂಕಿತ ಇದೀಗ ಮನೆಯಲ್ಲಿ ಐಸೋಲೇಷನ್ ಆಗುವಂತಾಗಿದೆ. ಸೋಂಕಿತರ ಸಂಬಂಧಿಕರು ಪದೇ ಪದೇ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಫೋನ್ ಮಾಡಿದ ನಂತರ ಇದೀಗ ಮನೆ ಮುಂಭಾಗವನ್ನ ಸೀಲ್ಡೌನ್ ಮಾಡಿದೆ. ಹೀಗಾಗಿ ಸೋಂಕಿತರೊಂದಿಗೆ ಅವರ ಪತ್ನಿ ಮನೆಯಲ್ಲಿ ಪತಿಯ ಜೊತೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.