ಚಿಕ್ಕಬಳ್ಳಾಪುರ: ಬೆಂಗಳೂರು ಮಹಾನಗರ ಇಡೀ ವಿಶ್ವದಲ್ಲೇ ದಿ ಡೈನಾಮಿಕ್ ಸಿಟಿ. ಅನೇಕ ದೇಶಗಳ ಹಲವರು ಇಲ್ಲಿ ವಾಸ ಮಾಡುತ್ತಿದ್ದಾರೆ. 30 ಲಕ್ಷ ಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಂಗಳೂರು ಮಹಾನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ರಾಜ್ಯ ಸರ್ಕಾರ ಸುಮ್ಮನಿರಲ್ಲ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಳೆದ ರಾತ್ರಿಯಿಂದ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯನ್ನ ಗಮನಿಸಿದ್ದೀನಿ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಪಿತೂರಿ ಅನ್ನೋದು ನನಗೆ ಭಾಸವಾಗುತ್ತದೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಕಾನೂನನ್ನ ಯಾರೂ ಕೂಡ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೂ ಕೂಡ ಕೆಲವರು ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸೂಕ್ತ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇಂತಹ ಘಟನೆಗಳನ್ನ ಬಹುಶಃ ಬೆಂಗಳೂರಲ್ಲಿ ನಾವು ನೋಡಿರಲಿಲ್ಲ. ರಾತ್ರಿ 2-3 ಸಾವಿರ ಮಂದಿ ಆಟೋ, ಲಾರಿಗಳಲ್ಲಿ ಕಲ್ಲುಗಳನ್ನ ತುಂಬಿಕೊಂಡು ಬಂದು ಗಲಭೆ ಮಾಡುತ್ತಿದ್ದರು. ಕಾಶ್ಮೀರದಂತಹ ನಗರಗಳಲ್ಲಿ ಇಂತಹ ಘಟನೆಗಳನ್ನ ಕಂಡಿದ್ದೀವಿ. ಆದರೆ ಬೆಂಗಳೂರಲ್ಲಿ ನೋಡೇ ಇರಲಿಲ್ಲ. ಹೀಗಾಗಿ ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಾಯಕರು ಹೇಳಿಕೆಗೋಸ್ಕರ ಹೇಳಿಕೆ ನೀಡಬಾರದು. ತನಿಖೆ ನಂತರ ಪಿತೂರಿ ಯಾವ ಸಂಘಟನೆ ಕೈವಾಡ ಅಂತ ಬಯಲಾಗಲಿದೆ ಎಂದರು. ಬಿಜೆಪಿಗೆ ಕೀಳುಮಟ್ಟದ ರಾಜಕಾರಣ ಮಾಡುವ ಪಕ್ಷವಲ್ಲ. ಸರ್ಕಾರಕ್ಕೆ ಕೊರೊನಾ ನಿಗ್ರಹ, ಪ್ರವಾಹ ಪರಿಸ್ಥಿತಿಯ ಸವಾಲುಗಳಿದ್ದು, ಅದರ ನಡುವೆ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕಿದೆ ಎಂದು ಸುಧಾಕರ್ ಹೇಳಿದರು.