ನವದೆಹಲಿ: ದೇಶದಲ್ಲಿ ದೇಶೀಯ ವಿಮಾನಯಾನ ಸೇವೆ ಪುನರಾರಂಭವಾದ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾದ ಪ್ರಯಾಣಿಕರ ಸಂಖ್ಯೆ 23ಕ್ಕೇರಿದೆ.
ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಮೇ 26 ರಂದು ಆಗಮಿಸಿದ್ದ ವಿಮಾನದಲ್ಲಿ ಆರು ಮಂದಿ, ದೆಹಲಿಯಿಂದ ಜಮ್ಮುವಿಗೆ ಮೇ 27 ರಂದು ಆಗಮಿಸಿದ್ದ ಮೂವರು, ದೆಹಲಿಯಿಂದ ಕೊಯಮತ್ತೂರಿಗೆ ಮೇ 27 ಮಂದಿಗೆ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರ ವರದಿಯಲ್ಲೂ ಕೊರೊನಾ ಪಾಸಿಟಿವ್ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ವಿಮಾನಯಾನ ಸಂಸ್ಥೆ, ಎಲ್ಲಾ ಪ್ರಯಾಣಿಕರಿಗೂ ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಧರಿಸಿಯೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಎಲ್ಲಾ ವಿಮಾನಗಳನ್ನು ಪ್ರಯಾಣಿಕರಿಗೆ ಸೇವೆ ನೀಡಿದ ಬಳಿಕ ತಪ್ಪದೇ ನಿರಂತರವಾಗಿ ಸ್ಯಾನಿಟೈಸ್ ಮಾಡಿ ಮರುಸೇವೆ ನೀಡಲಾಗುತ್ತಿದೆ. ಅಲ್ಲದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ 14 ದಿನಗಳ ಹೋ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಸರ್ಕಾರ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದಿದ್ದಾರೆ.
ದೇಶೀಯ ವಿಮಾನಯಾನ ಆರಂಭವಾದ ಬಳಿಕ ಮೇ 26 ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ಮೇ 25 ರಂದು ವ್ಯಕ್ತಿ ಪ್ರಯಾಣ ಮಾಡಿದ್ದ. ಆ ಬಳಿಕ ಮೇ 25 ರಂದು ದೆಹಲಿಯಿಂದ ಲೂದಿಯಾನಕ್ಕೆ ಅಲೈಯನ್ಸ್ ಏರ್ ವಿಮಾನ(91837)ದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಎರಡು ವಿಮಾನದಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮೇ 27 ರಂದು ಸ್ಪೈಸ್ ಜೆಟ್ 8194 ವಿಮಾನದಲ್ಲಿ ಅಹಮಾಬಾದ್ನಿಂದ ದೆಹಲಿಗೆ ಹಾಗೂ ಮೇ 25 ರಂದು ಎಸ್ಜಿ 8152 ವಿಮಾನದಲ್ಲಿ ದೆಹಲಿಯಿಂದ ಗುವಾಹಟಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಇಂಡಿಗೋ 6ಇ 7214 ವಿಮಾನದಲಿ ಬೆಂಗಳೂರಿನಿಂದ ಮಧುರೈಗೆ ಆಗಮಿಸಿದ್ದ ರೋಗ ಲಕ್ಷಣಗಳು ಕಂಡುಬಾರದ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಆಗಮಿಸಿತ್ತು.
ಟ್ರೂಜೆಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈನಿಂದ ಸೇಲಂಗೆ ಮೇ 27 ರಂದು ಪ್ರಯಾಣಿಸಿದ್ದ 6 ಮಂದಿಗೂ ಕೊರೊನಾ ಕಂಡು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಏರ್ ಪ್ಯಾಸೆಂಜರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಿ ಸುಧಾಕರ ರೆಡ್ಡಿ, ಇದುವರೆಗೂ 23 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಸುರಕ್ಷತಾ ವ್ಯವಸ್ಥೆ ಕೈಗೊಂಡ ಬಳಿಕವೂ ಪ್ರಕರಣಗಳು ಕಂಡು ಬಂದಿರುವುದು ದುರದೃಷ್ಟಕರ. ಇದು ನಮಗೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯನ್ನು ಪುನರ್ ವಿಮರ್ಶೆ ಮಾಡಿ ಬದಲಾವಣೆ ತರುವ ಸಮಯ ಅನ್ನಿಸುತ್ತದೆ ಎಂದಿದ್ದಾರೆ.
ಆರೋಗ್ಯ ಸೇತು ಮತ್ತು ಥರ್ಮಲ್ ಪರೀಕ್ಷೆಗಳು ಕೋವಿಡ್-19 ರೋಗಿಗಳನ್ನು ಗುರುತಿಸಲು ನಿರೀಕ್ಷಿತ ಸಹಕಾರಿ ಆಗಿಲ್ಲ ಎಂದು ಏರ್ ಇಂಡಿಯಾ ಮಾಜಿ ಕಾರ್ಯನಿರ್ವಾಹಕ ಜೀತಿಂದರ್ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮೊದಲ ನಾಲ್ಕು ದಿನಗಳ ಅವಧಿಯಲ್ಲಿ ಕಡಿಮೆ ಪ್ರಯಾಣಿಕರೊಂದಿಗೆ ವಿಮಾನಯಾನ ಆರಂಭವಾದರೂ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಮತ್ತಷ್ಟು ಪ್ರಯಾಣಿಕರು ವಿಮಾನ ಸಂಚಾರದಿಂದ ದೂರ ಉಳಿಯುವಂತೆ ಮಾಡಿದೆ. ಇದು ವಿಮಾನ ಪ್ರಯಾಣಿಕರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ 50 ವಿಮಾನಗಳು 16 ನಗರಕ್ಕೆ ಸಂಚರಿಸಿದೆ. ಒಟ್ಟು 5,583 ಪ್ರಯಾಣಿಕರ ಪೈಕಿ 4,255 ಮಂದಿ ಪ್ರಯಾಣಿಸಿದ್ದಾರೆ.