ಬೆಂಗಳೂರು: ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಾಮಾಕ್ಷಿಪಾಳ್ಯದ ಕಾವೇರಿನಗರದಲ್ಲಿ ನಡೆದಿದೆ.
ಮೂಲತಃ ಮೈಸೂರಿನವರಾದ ನರಸಿಂಹ ರಾಜು (70), ಪತ್ನಿ ಸರಸ್ವತಿ (64) ಹತ್ಯೆಯಾದವರು. ಈ ದಂಪತಿ ಕಳೆದೊಂದು ವರ್ಷದಿಂದ ಕಾವೇರಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಬುಧವಾರ ಬೆಳಗ್ಗೆ ಮನೆ ಕೆಲಸದ ಮಹಿಳೆ ಮನೆಗೆ ಬಂದು ನೋಡಿದಾಗ ದಂಪತಿ ಮೃತಪಟ್ಟಿದ್ದರು.
ನರಸಿಂಹ ರಾಜು ದಲ್ಲಾಳಿಯಾಗಿದ್ದರೆ, ಪತ್ನಿ ಸರಸ್ವತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದರೆ ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಘಟನೆಯ ಬಳಿಕ ದಂಪತಿಯ ಪುತ್ರ ಸಂತೋಷ್ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವೃದ್ಧ ದಂಪತಿಯ ಮನೆ ಕೆಲಸದ ಮಹಿಳೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.