ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಐಎಂಎ ರೀತಿಯ ಮತ್ತೊಂದು ದೋಖಾ ಕಂಪನಿಯ ಬಣ್ಣ ಬಯಲಾಗಿದೆ. ಅಧಿಕ ಬಡ್ಡಿ ಆಸೆ ತೋರಿಸಿದ ಫೈನಾನ್ಸ್ ಕಂಪನಿ ಬಾಗಿಲು ಮುಚ್ಕೊಂಡು ನಾಟ್ ರಿಚಬಲ್ ಆಗಿದೆ. ಲಕ್ಷ ಲಕ್ಷ ದುಡ್ಡು ಕಟ್ಟಿದವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಐಎಂಎ, ಅಜ್ಮೀರಾ ಹಾಗೂ ಆಂಬಿಡೆಂಟ್ ದೋಖಾ ಕಂಪನಿಗಳ ನಂತರದ ಸರದಿ ವಿಶ್ವ ಪ್ರಿಯ ಫೈನಾನ್ಸ್ ಕಂಪನಿ ಆ ಸಾಲಿಗೆ ಸೇರಿಕೊಂಡಿದೆ. ತಮಿಳುನಾಡು ಮೂಲದ ಸುಬ್ರಮಣ್ಯಂ ರಾಮಸ್ವಾಮಿ ಎಂಬವರ ಒಡೆತನದ ವಿಶ್ವಪ್ರಿಯ ಫೈನಾನ್ಸಿಯಲ್ ಆಂಡ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯೇ ಫ್ರಾಡ್ ಮಾಡಿರುವ ಆರೋಪ ಹೊತ್ತಿದೆ. ತಮಿಳುನಾಡು, ಕರ್ನಾಟಕ ಸೇರಿ ದಕ್ಷಿಣ ಭಾರತದ ಹಲವೆಡೆ ಈ ವಿಶ್ವಪ್ರಿಯ ಕಂಪನಿ ತನ್ನ ಕಾರ್ಯನಿರ್ವಹಿಸಿತ್ತು. ಇದಾದ ಬಳಿಕ ಕೆಲವೇ ವರ್ಷಗಳಲ್ಲಿ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ತನ್ನ ನಂಬಿಕಸ್ಥ ಗ್ರಾಹಕರಿಗೆ ಕೋಟಿ-ಕೋಟಿ ವಂಚಿಸಿ ಬಾಗಿಲು ಮುಚ್ಚಿಕೊಂಡಿದೆ.
2012 ರಲ್ಲಿ ಬೆಂಗಳೂರನಲ್ಲಿ ತನ್ನ ಬ್ರ್ಯಾಂಚ್ ಓಪನ್ ಮಾಡಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ನಿವೃತ್ತ ನೌಕರರನ್ನು ಹಾಗೂ ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿತ್ತು. ಬಳಿಕ ಮನೆ-ಮನೆಗೆ ತೆರಳುತ್ತಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ಏಜೆಂಟ್ ಗಳು ವೃದ್ಧರ ಮನವೊಲಿಸಿ, ಶೇ.10.47 ರಷ್ಟು ಬಡ್ಡಿ ಆಸೆ ತೋರಿಸಿ ಏನಿಲ್ಲ ಅಂದ್ರು ಒಬ್ಬೊರಿಂದ ಕನಿಷ್ಠ 1 ಲಕ್ಷ ದಿಂದ 50 ಲಕ್ಷದ ವರೆಗೂ ಇನ್ವೆಸ್ಟ್ ಮಾಡಿಸಿಕೊಂಡಿದ್ದಾರೆ.
ಬ್ರ್ಯಾಂಚ್ ಓಪನ್ ಆದ ನಂತರ ವರ್ಷಕ್ಕೆ ಒಮ್ಮೆ ಬಡ್ಡಿ ಹಣ ಹಾಕಲಾಗುವುದು ಅಂತಾ ನಂಬಿಸಿ ಒಂದೇ ಸಾರಿ ಕೈ ಎತ್ತಿದ್ದಾರೆ. ಸದ್ಯ ಅಸಲಿ ಹಣವೂ ಇಲ್ಲ, ಬಡ್ಡಿ ಇಲ್ಲದೇ ಹೂಡಿಕೆ ಮಾಡಿದ ಜನರು ಕೋರ್ಟ್ ಮೂಲಕ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ನಗರದ ಗಿರಿನಗರ, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಸದ್ಯಕ್ಕೆ ಕೇಸ್ ಗಳು ದಾಖಲಾಗುತ್ತಿದ್ದು, ಎರಡು ಠಾಣೆಗೆ ಬಂದಿರುವ ಕೇಸ್ ಅಧಾರದ ಮೇಲೆ ಎಂಟು ಕೋಟಿಗೂ ಅಧಿಕ ಎನ್ನಲಾಗಿದೆ. ಇನ್ನೂ ವಿಶ್ವಪ್ರಿಯ ಫೈನಾನ್ಸ್ ಕಂಪನಿ ಒಟ್ಟು ನೂರು ಕೋಟಿಗೂ ಅಧಿಕ ಹಣ ವಂಚನೆ ಮಾಡಿರಬಹುದು ಅಂತಾ ಪೊಲೀಸರು ಅಂದಾಜಿಸಿದ್ದಾರೆ.