ಬೆಂಗಳೂರು: ನಗರದಲ್ಲಿ ಕೊರೊನಾ ಸುನಾಮಿಯಂತೆ ನುಗ್ಗುತ್ತಿದೆ. ಕಳೆದೊಂದು ವಾರದಿಂದ ಕೊರೋನಾ ಸ್ಫೋಟವಾಗುತ್ತಿದ್ದು, ಸೋಂಕಿನ ಶತಕದ ಮೇಲೆ ಶತಕ ದಾಖಲಾಗುತ್ತಿದೆ. ಹೆಮ್ಮಾರಿ ಕೊರೊನಾ ಹೆಮ್ಮಾರಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರ ನಡುವೆ ಸೋಂಕಿತರ ಸಾವಿನ ಸಂಖ್ಯೆಯೂ ಭೀತಿ ಮೂಡಿಸುತ್ತಿದೆ. ಬೆಂಗಳೂರಿಗರನ್ನು `ಚೀನಿ ವೈರಸ್’ ನಿಂದ ರಕ್ಷಿಸಲು ಲಾಕ್ಡೌನ್ ಮತ್ತೆ ಜಾರಿಗೆ ತರಬೇಕು ಎಂಬ ಬಗ್ಗೆ ಬಗ್ಗೆ ವ್ಯಾಪಕ ಚರ್ಚೆ ಆಗಿತ್ತು.
ಸಿಲಿಕಾನ್ ಸಿಟಿ ಮತ್ತೆ ಲಾಕ್ಡೌನ್ ಆಗುತ್ತಾ? ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಆಗಲೂಬಹುದು ಎಂದು ಕೊಳ್ಳುತ್ತಿದ್ದ ಜನರ ಅನುಮಾನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಬೆಂಗಳೂರು ಲಾಕ್ಡೌನ್ ಇಲ್ಲವೇ ಇಲ್ಲ ಎಂದು ಹೇಳಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಶಾಸಕರು, ಸಚಿವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಲಾಕ್ಡೌನ್ ಜಾರಿಯ ಪ್ರಶ್ನೆಯೇ ಇಲ್ಲ ಅಂತಾ ಸಿಎಂ ಬಿಎಸ್ವೈ ಪುನರ್ ಉಚ್ಛರಿಸಿದರು.
ಬೆಂಗಳೂರು ಸರ್ವಪಕ್ಷ ನಾಯಕರ ಸಭೆಗೆ ಮೊದಲು ಯಡಿಯೂರಪ್ಪ ಮತ್ತೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಈಗಷ್ಟೇ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಹೀಗಾಗಿ ಮತ್ತೆ ಲಾಕ್ಡೌನ್ ಪ್ರಸ್ತಾಪ ಇಲ್ಲ ಎಂದರು. ಬಳಿಕ ಮಾತನಾಡಿದ ಬೆಂಗಳೂರಿನ ಕೊರೊನಾ ಉಸ್ತುವಾರಿ ಸಚಿವ ಅಶೋಕ್ ಅವರು ಕೂಡ, ಲಾಕ್ಡೌನ್ ಇಲ್ಲ. ಸೋಂಕು ಬಂದಿರುವ ಏರಿಯಾವನ್ನು ಸೀಲ್ಡೌನ್ ಮಾಡುತ್ತೇವೆ. ಜೀವ ಮತ್ತು ಜೀವನ ಎರಡೂ ಬಹಳ ಮುಖ್ಯ. ಜೀವಾನೂ ಉಳಿಬೇಕು. ಜೀವನಾನೂ ನಡೀಬೇಕು. ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಶಾಸಕರು ಕೊಟ್ಟಿದ್ದಾರೆ. ಅದನ್ನು ಜಾರಿಗೆ ತರುತ್ತೇವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಸೋಂಕು ಕಡಿಮೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಮೀಸಲು ಇಡಲು ಸೂಚನೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಇಲ್ಲದವರ ಕ್ವಾರಂಟೈನ್ ಮಾಡಲು ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕರೆದಿದ್ದ ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇಂದಿನ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಲಾಕ್ಡೌನ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕೊರೊನಾ ಆರಂಭದ ದಿನಗಳಲ್ಲಿ ಮಾಡಿದ್ದು ಲಾಕ್ಡೌನ್ ಅಲ್ಲ, ನಿಜವಾಗಿಯೂ ಈಗ ಲಾಕ್ಡೌನ್ ಬೇಕು. ಅಲ್ಲದೇ ಸೋಂಕಿನ ನಿಯಂತ್ರಣಕ್ಕೆ ರ್ಯಾಂಡಮ್ ಟೆಸ್ಟ್ ಮಾಡಿಸಬೇಕು. ರಾಜ್ಯದ ಹಲವು ಭಾಗಗಳಲ್ಲಿ ಸೋಂಕಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಗಂಭೀರತೆ ಬರಬೇಕಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿ ಆಗುತ್ತಿದೆ. ಸರಿಯಾದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಸಮಸ್ಯೆಯಾಗದಂತೆ ಮತ್ತಷ್ಟು ಎಚ್ಚರಿಕೆ ವಹಿಸಿಬೇಕು ಎಂದಿದ್ದರು.
ಬೆಂಗಳೂರಿನಲ್ಲಿ ಸಮುದಾಯದ ಹಂತಕ್ಕೆ ಹರಡಲು ಶುರುವಾಗಿದೆ. ಪ್ರತಿಯೊಬ್ಬರ ಪ್ರಾಣ ಕಾಪಾಡಬೇಕು ಅಂದರೆ ಲಾಕ್ಡೌನ್ ಮಾಡಲೇಬೇಕಿದೆ. ಅದರಲ್ಲೂ ನಗರದ ಸ್ಲಂಗಳಿಗೆ ಸೋಂಕು ಹರಡಬಾರದು. ಪ್ರಮುಖ ಮಾರ್ಕೆಟ್ ಏರಿಯಾಗಳಲ್ಲಿ ಸರ್ಕಾರ ಹೆಚ್ಚು ನಿಗಾವಹಿಸಬೇಕು. ಸೋಂಕಿತ ವ್ಯಕ್ತಿಗಳ ಅಂತ್ಯಸಂಸ್ಕಾರ ಸರಿಯಾದ ಕ್ರಮದಲ್ಲಿ ನಿರ್ವಹಿಸುತ್ತಿಲ್ಲ ಎಂದು ಸೋಂಕು ತಡೆಗಟ್ಟುವಲ್ಲಿ ಸರ್ಕಾರಕ್ಕೆ ಸಲಹೆಗಳನ್ನು ನೀಡಿದರು.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣದಲ್ಲಿ ವಿಫಲರಾಗಿದ್ದು, ಈಗ ಲಾಕ್ಡೌನ್ ಮಾಡುವ ಅಗತ್ಯವಿದೆ ಎಂದರು. ಸಿಎಂ ಸಭೆ ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಸರ್ಕಾರಕ್ಕೆ ಲಾಕ್ಡೌನ್ ಮಾಡೋ ಮನಸ್ಸಿನಲ್ಲ. ಈಗ ಇರುವ ವಾತಾವರಣದಲ್ಲೇ ಕೋವಿಡ್ ನಿಯಂತ್ರಣ ಮಾಡಬೇಕೆಂಬ ಮನಸ್ಸು ಅವರಿಗಿದೆ. ನಮ್ಮ ಸಲಹೆ ಸೂಚನೆಯನ್ನು ಸರ್ಕಾರ ಪಾಲನೆ ಮಾಡಿಲ್ಲ ಎಂದು ಸಭೆಯಲ್ಲಿ ಹೇಳಿರುವುದಾಗಿ ತಿಳಿಸಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರಕ್ಕೆ ಲಾಕ್ಡೌನ್ ಮಾಡುವ ಸಾಮರ್ಥ್ಯವಿಲ್ಲ. ಮೊದಲ ಲಾಕ್ಡೌನ್ ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದು, ಸರ್ಕಾರ ಎಲ್ಲಿ ಎಡವಿರದೇ ಎಂಬುದನ್ನು ಗಮನಕ್ಕೆ ತಂದಿದ್ದೇವೆ. ಸರ್ಕಾರನೂ ನಮ್ಮ ಸಲಹೆಗಳನ್ನು ಸ್ವೀಕರಿಸಿ ಭರವಸೆ ನೀಡಿದೆ ಎಂದರು. ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್, ಸಾಕಷ್ಟು ಕಡೆ ಸಮಸ್ಯೆ ಇದೆ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಸರಿಪಡಿಸಲು ಸಲಹೆ ನೀಡಿದ್ದೇನೆ ಎಂದರು. ನಗರದಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಪ್ರಕ್ರಿಯೆ ಆರಂಭವಾಗಿದ್ದು, ಕನಿಷ್ಠ 10 ದಿನಗಳ ಕಾಲ ಲಾಕ್ಡೌನ್ ಮಾಡಬೇಕಿದೆ ಎಂದು ಶಾಸಕ ಹ್ಯಾರಿಸ್ ಹೇಳಿದರು. ಸದ್ಯಕ್ಕೆ ಬೆಂಗಳೂರಿಗಳಲ್ಲಿ ಇದ್ದ ಲಾಕ್ಡೌನ್ ಆತಂಕ ದೂರವಾಗಿದ್ದು, ಎಚ್ಚರಕೆ ವಹಿಸದೆ ಬೇಕಾಬಿಟ್ಟಿ ಓಡಾಟ ನಡೆಸುದರೆ ಸೋಂಕು ಮತ್ತಷ್ಟು ಹೆಚ್ಚಾಗಲಿದೆ.