ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಎಲ್ಲಾ ಕಡೆ ಉತ್ತಮ ಮಳೆ ಆಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರಕ್ಕೆ 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಬೆಂಗಳೂರಿನ ಕಾವಲಬೈರಸಂದ್ರದಲ್ಲಿ ರಾತ್ರಿ ಕರೆಂಟ್ ಹೊಡೆದು ಬಾಲಕಿ ಮೃತಪಟ್ಟಿದ್ದಾಳೆ. 8 ವರ್ಷದ ಫಾತಿಮಾ ಮಳೆದಿಂದಾಗಿ ವಿದ್ಯುತ್ ಕಂಬದಿಂದ ಕರೆಂಟ್ ಪಾಸ್ ಆಗಿ ಮೃತಪಟ್ಟಿದ್ದಾಳೆ.
ಬೆಂಗಳೂರಿನಲ್ಲಿ ರಾತ್ರೋರಾತ್ರಿ ಮೆಜೆಸ್ಟಿಕ್, ಮಲ್ಲೇಶ್ವರಂ, ವಿಧಾನಸೌಧ, ಕಾರ್ಪೋರೇಷನ್ ಸರ್ಕಲ್, ಎಂಜಿ ರಸ್ತೆ, ಶಿವಾಜಿನಗರ, ಶೇಷಾದ್ರಿ ಪುರಂ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದ ಮಳೆಯ ಅಬ್ಬರಕ್ಕೆ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ನಂದಿನಿ ಲೇಔಟ್ನಲ್ಲಿ ಚೇಂಬರ್ ಓಪನ್ ಆಗಿ ಮನೆಗಳಿಗೆ ನೀರು ನುಗ್ಗಿದೆ. ಇತ್ತ ದೊಡ್ಡ ಬೊಮ್ಮಸಂದ್ರದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ರಾಗಿ, ಅಕ್ಕಿ ದವಸ ಧಾನ್ಯಗಳು ಮಳೆಯಿಂದ ಹಾನಿಯಾಗಿದೆ. ಅಲ್ಲದೇ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಮಳೆ ನೀರಿನಿಂದ ಹಾಳಾಗಿವೆ.
ಸೋಮವಾರ ರಾತ್ರಿಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹೆಬ್ಬಾಳ, ಯಲಹಂಕ, ಸಂಜಯ್ ನಗರ, ನಾಗವಾರ, ಆರ್.ಟಿ ನಗರ, ಯಶವಂತಪುರ, ಮಲ್ಲೇಶ್ವರಂ, ಕೆ.ಆರ್.ಪುರಂ, ಬಾಣಸವಾಡಿ, ಮೈಸೂರು ರೋಡ್ ಚಾಮರಾಜಪೇಟೆ ಸೇರಿದಂತೆ ಬಹುತೇಕ ಭಾಗಗಲ್ಲಿ ಮಳೆಯ ಅಬ್ಬರ ಜೋರಾಗಿತ್ತು.
ಇನ್ನೂ ಚೊಕ್ಕಸಂದ್ರ ಕೆರೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು, ಚೊಕ್ಕಸಂದ್ರ ಲೇಕ್ ರೋಡ್ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಮಳೆಯಿಂದಾಗಿ ಸ್ಥಳೀಯರು ಆತಂಕ ಪಡುತ್ತಿದ್ದಾರೆ.