ಬೆಂಗಳೂರು: ಇಂದಿನಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ಡೌನ್ ಆಗಿದೆ. ಹೀಗಾಗಿ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಆದರೆ ರೈಲು ಸಂಚಾರ ಬಂದ್ ಮಾಡಿಲ್ಲ. ಹೀಗಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೂರಾರು ಜನರಿದ್ದಾರೆ.
ಈ ಬಾರಿಯ ಲಾಕ್ಡೌನ್ನಲ್ಲಿ ರೈಲು ಮತ್ತು ಏರ್ಪೋರ್ಟ್ ಬಂದ್ ಮಾಡಿಲ್ಲ. ಹೀಗಾಗಿ ಅನೇಕರು ರೈಲು ಮತ್ತು ವಿಮಾನಗಳ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಇದ್ದಾರೆ. ಇಂದು ಬೆಳಗ್ಗೆ 9.25ಕ್ಕೆ ಸಂಗಮಿತ್ರ ಎಕ್ಸ್ ಪ್ರೆಸ್ ರೈಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡಲಿದೆ.
ಈ ರೈಲು ಬೆಂಗಳೂರಿನಿಂದ ಪಾಟ್ನಾಗೆ ಹೊರಡಲಿದೆ. ಹೀಗಾಗಿ ನೂರಾರು ವಲಸೆ ಕಾರ್ಮಿಕರು ಗುಂಟು-ಮೂಟೆ ಕಟ್ಟಿಕೊಂಡು ಪಾಟ್ನಾದತ್ತ ಹೊರಟಿದ್ದಾರೆ. ಈ ರೈಲಿನಲ್ಲಿ ಸಾರ್ವಜನಿಕರು ಕೂಡ ಸಂಚರಿಸಬಹುದು. ಇಂದು ಬೆಂಗಳೂರಿನಿಂದ 12 ರೈಲುಗಳು ಹೊರಡಲಿವೆ.
ಪುಟ್ಟ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ರೈಲಿಗಾಗಿ ಕಾದು ಕುಳಿತಿದ್ದಾರೆ. ಇಡೀ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೇ ಜನರು ರೈಲಿಗಾಗಿ ಕಾಯುತ್ತಿದ್ದಾರೆ.