ಬೆಂಗಳೂರು: ನಗರದಲ್ಲಿ 6 ದಿನಗಳ ಲಸಿಕೆ ಅಭಿಯಾನದಲ್ಲಿ 7 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಹೇಳಿದ್ದಾರೆ.
ಕಾರ್ಪೋರೇಷನ್ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆ ಈಗಾಗಲೇ ನೀಡಲಾಗಿದೆ. ಸದ್ಯ ಲಸಿಕೆ 7 ಜನರ ಮೇಲೆ ಅಡ್ಡಪರಿಣಾಮ ಬೀರಿದೆ. ಆದರೆ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣ ಕಂಡು ಬಂದಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಅಡ್ಡಪರಿಣಾಮ ಬೀರಿದ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ ಗುಣಮುಖ ಮಾಡಲಾಗಿದೆ ಎಂದರು.
ಎಲ್ಲೆಲ್ಲಿ ಅಡ್ಡ ಪರಿಣಾಮ?
ಕೊರೋನಾ ಲಸಿಕೆ ಪಡೆದ ನಂತರ ಯಲಹಂಕ ವಲಯದಲ್ಲಿ 2, ಪಶ್ಚಿಮದಲ್ಲಿ 2, ಆರ್ ಆರ್ ನಗರದಲ್ಲಿ 2, ಪೂರ್ವದಲ್ಲಿ 1 ಒಟ್ಟಾರೆಯಾಗಿ 7 ಮಂದಿ ಆರೋಗ್ಯ ಕಾರ್ಯಕರ್ತರು ಅಡ್ಡಪರಿಣಾಮ ಎದುರಿಸಿದ್ದಾರೆ. ಈ ವೇಳೆ ಜ್ವರ, ಮೈ ಕೈ ನೋವು, ತಲೆ ಸುತ್ತು, ನೆಲಕ್ಕೆ ಕುಸಿಯುವ ಲಕ್ಷಣಗಳು ಕಂಡು ಬಂದಿದೆ.
ಯಲಹಂಕ ಭಾಗದ ಆರೋಗ್ಯ ಕಾರ್ಯಕರ್ತ ಮಹಿಳೆ ಲಸಿಕೆ ಪಡೆದಾಗ ಕೆಳಗೆ ಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇದೀಗ ಎಲ್ಲರಿಗೂ ಆರೋಗ್ಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಿ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು.
ಯಾವುದೇ ಲಸಿಕೆ ತೆಗೆದುಕೊಂಡಾಗ ಕೆಲವರಿಗೆ ಅಡ್ಡ ಪರಿಣಾಮವಾಗುವುದು ಸಾಮಾನ್ಯ. ಇದಕ್ಕೆ ಯಾರೂ ಹೆದರುವ ಅಗತ್ಯವಿಲ್ಲ ಎಂದು ಲಸಿಕೆ ವಿತರಣೆ ನಡೆಯುವ ಮುನ್ನವೇ ತಜ್ಞರು ವೈದ್ಯರು ತಿಳಿಸಿದ್ದರು.