ಬೆಂಗಳೂರು: ಮಹಾಮಾರಿ ಕೊರೊನಾ ನಡುವೆ ಸಿಲಿಕಾನ್ ಸಿಟಿಯಲ್ಲಿ ಪಾತಕ ಲೋಕ ತಲೆ ಎತ್ತಿದೆ. ಟೆಕ್ಸ್ ಟೈಲ್ ಉದ್ಯಮಿ ಮಗನನ್ನು ಕಿರಾತಕರು ಕಿಡ್ನಾಪ್ ಮಾಡಿದ್ದು, ಹಣಕ್ಕಾಗಿ ಬೇಡಿ ಇಟ್ಟಿದ್ದರು. ಇದೀಗ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ ಭಾರತಿನಗರದ ಉದ್ಯಮಿ ಸಾದಿಕ್ ಅವರ 11 ವರ್ಷದ ಮಗನನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಶುಕ್ರವಾರ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಬಾಲಕನನ್ನು ಅಪಹರಿಸಿಕೊಂಡು ಹೋಗಿದ್ದರು. ಅಲ್ಲದೇ ಕಿಡ್ನಾಪರ್ಸ್ ಉದ್ಯಮಿ ಬಳಿ ಎರಡು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಉದ್ಯಮಿ ತಕ್ಷಣ ಭಾರತಿನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಪೊಲೀಸರು ಕೂಡಲೇ ಐದು ತಂಡಗಳ ರಚನೆ ಮಾಡಿಕೊಂಡು ಬಾಲಕನ ಪತ್ತೆಯಾಗಿ ಶೋಧಕಾರ್ಯ ಶುರುಮಾಡಿದ್ದರು. ಕೊನೆಗೆ ತುಮಕೂರು ಬಳಿ ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದಾರೆ. ಅಲ್ಲದೇ ಕಿಡ್ನಾಪ್ ಆಗಿದ್ದ ಬಾಲಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಉದ್ಯಮಿಯ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಕಿಡ್ನಾಪ್ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಪೂರ್ವ ವಿಭಾಗ ಪೊಲೀಸರು ಮೂವರು ಅಪಹರಣಕಾರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.