ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ವಿಷಮವಾಗ್ತಿದೆ. ಕಳೆದ ವರ್ಷದ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಸನ್ನಿವೇಶ ಮರುಕಳಿಸುವ ದೃಶ್ಯವೊಂದು ಇವತ್ತು ಬೆಚ್ಚಿಬೀಳಿಸಿದೆ.
ಬಸವನಗುಡಿಯ 58 ವರ್ಷದ ಸೋಂಕಿತೆಯೊಬ್ಬರಿಗೆ ಬೆಡ್ ಸಿಗದೆ ಫುಟ್ಪಾತ್ನಲ್ಲಿ ನರಳಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ಮಲ್ಯ ಆಸ್ಪತ್ರೆಯಲ್ಲಿ ಮಹಿಳೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ತಿದ್ರು. ಮೊನ್ನೆ ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದ ಮಹಿಳೆಗೆ ನಿನ್ನೆ ಪಾಸಿಟಿವ್ ಬಂದಿದೆ.
ಆತಂಕಕ್ಕೊಳಗಾದ ಮಹಿಳೆ ಕಣ್ಣೀರು ಸುರಿಸಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರೂ ಮಲ್ಯ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಕಳೆದುಕೊಂಡು ಹೊರ ಹಾಕಿದೆ. ನಮ್ಮದು ನಾನ್-ಕೋವಿಡ್ ಆಸ್ಪತ್ರೆ ಅಂತ ಹೇಳಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ನೀಡದೆ, ಡಯಾಲಿಸಿಸ್ ಕೂಡಾ ಮಾಡದೆ ಹೊರ ಹಾಕಿದೆ. ಮಹಿಳೆಗೆ ಕಾಲು ಏಟಾಗಿದ್ದು ನಡೆಯಲು ಆಗದೆ ಇಡೀದಿನ ಫುಟ್ಪಾತ್ನಲ್ಲಿ ಊಟ, ನೀರು ಇಲ್ಲದೆ ಏಕಾಂಗಿಯಾಗಿ ಒದ್ದಾಡಿದ್ದಾರೆ.
ಇವರು ಮಾಜಿ ಎಂಎಲ್ಎ, ಮಾಜಿ ಮೇಯರ್ ಚಂದ್ರಶೇಖರ್ ಅವರ ಸಹೋದರಿಯಾಗಿದ್ದಾರೆ. ಸಹೋದರಿ ಒಬ್ಬರೇ ಹೋಗಿದ್ದು ನನಗೆ ತಿಳಿದಿರಲಿಲ್ಲ. ಸುದ್ದಿ ತಿಳಿದು ತೀವ್ರ ನೋವಾಯಿತು ಅಂತ ಮಲ್ಯ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಸದ್ಯಕ್ಕೆ ರಂಗಾದೊರೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.