ಬೆಂಗಳೂರು: ನಗರದಲ್ಲಿ ನಡೆದ ಬೆಡ್ ದಂದೆ ಸರ್ಕಾರಿ ವ್ಯವಸ್ಥೆಯೊಳಗೆ ನುಗ್ಗಿದ ಒಂದು ವ್ಯವಸ್ಥಿತ ಜಾಲ. ಬೆಡ್ ದಂಧೆ ಮಾಡಿದವರು ನರ ರಾಕ್ಷಸರು. ಅವರ ಮೇಲೆ 307 ಕೇಸು ದಾಖಲಿಸಬೇಕು ಎಂದು ಸಂಸದೆ ಶೋಭಾ ಕೆರಂದ್ಲಾಜೆ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಬೆಡ್ ದಂದೆ ಕೊಲೆ ಮಾಡಿದಕ್ಕಿಂತ ಘೋರ ಅಪರಾಧ, ಇದು ಅಮಾನವೀಯ ಬೆಳವಣಿಗೆ. ಆರೋಪಿಗಳ ಮೇಲೆ ಕೊಲೆ ಕೇಸು ದಾಖಲು ಮಾಡಿ ಆ ಕಂಪನಿಯನ್ನು ಪೂರ್ತಿ ಬರ್ಕಾಸ್ತು ಮಾಡಬೇಕು. ಈ ಕೃತ್ಯದಲ್ಲಿ ಶಾಮೀಲಾದ ಎಲ್ಲರಿಗೂ ಉಗ್ರ ಶಿಕ್ಷೆ ಕೊಡಬೇಕು. ಶಾಶ್ವತವಾಗಿ ಅವರನ್ನು ಜೈಲಿನಲ್ಲಿ ಇಡಬೇಕು. ಪರಿಸ್ಥಿತಿ ದುರುಪಯೋಗ ಮಾಡುವವರು ರಾಕ್ಷಸರು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯಗೂ ಗುರುತರ ಜವಾಬ್ದಾರಿ ಇದೆ:
ಕೊರೊನಾ ನಿರ್ವಹಣೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಿರುವ ಸಿದ್ದರಾಮಯ್ಯ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ವಿರೋಧಪಕ್ಷಕ್ಕೆ ಅಷ್ಟೆ ಜವಾಬ್ದಾರಿ ಇದೆ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ. ಸರ್ಕಾರಕ್ಕೆ ಸಲಹೆ ಕೊಡಿ. ಅಧಿಕಾರಿಗಳ ಸಭೆ ಕರೆಯಿರಿ ಎಂದು ಸಲಹೆ ನೀಡಿದರು. ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ಮಾಡಿದ್ದಾರೆ. 50 ವರ್ಷದ ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಆಸ್ಪತ್ರೆಗಳನ್ನು ಬೆಳೆಸಿಲ್ಲ. ರಾಜಕೀಯ ಮಾತನಾಡುವುದಿಲ್ಲ ಎಲ್ಲರೂ ಒಟ್ಟು ಸೇರಿ ಕೊರೊನಾ ಎದುರಿಸೋಣ ಎಂದು ತಿಳಿಸಿದರು.