ಬೆಂಗಳೂರು: ಪತಿಯ ನೈಟ್ ಶಿಫ್ಟ್ ರಹಸ್ಯವನ್ನು ಭೇದಿಸಿ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
ಪತಿ ಹಾಗೂ ಪತ್ನಿಯನ್ನು ಅಭಿಲಾಷ, ಶಶಿಕುಮಾರ್ ಎಂದು ಗುರುತಿಸಲಾಗಿದೆ. ಈ ದಂಪತಿ ಮದುವೆಯ ಬಳಿಕ ಬೆಂಗಳೂರಿನ ಶ್ರೀರಾಮಪುರದಲ್ಲಿ ವಾಸವಿತ್ತು. ವಿಶೇಷ ಎಂದರೆ ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ತಾನು ಇಷ್ಟಪಟ್ಟವನ ಜೊತೆಯೇ ಬದುಕಿ ಸುಂದರ ಸಂಸಾರ ಮಾಡಬಹುದೆಂಬ ಖುಷಿಯಲ್ಲಿದ್ದ ಪತ್ನಿಗೆ ಮೂರು ತಿಂಗಳಲ್ಲಿ ಶಾಕೊಂದು ಎದುರಾಗಿತ್ತು.
ಪ್ರತಿ ದಿನವೂ ಶಶಿಕುಮಾರ್ ನೈಟ್ ಶಿಫ್ಟ್ ಅಂತ ಪತ್ನಿಗೆ ಹೇಳಿ ಮನೆಯಿಂದ ಹೊರಹೋಗುತ್ತಿದ್ದ. ರಾತ್ರಿ 8 ಗಂಟೆ ಆದ್ರೆ ಸಾಕು ಬಾಸ್ ಬೈತಾರೆ. ಟೈಂ ಆಯ್ತು ಅಂತ ಅರ್ಜೆಂಟ್ ಆಗಿ ಮನೆ ಬಿಡ್ತಿದ್ದ. ಗಂಡನ ಪ್ರತಿ ದಿನದ ವರ್ತನೆ ನೋಡಿದ ಪತ್ನಿ ಒಂದು ದಿನ ಫಿಕ್ಸ್ ಮಾಡಿಯೇ ಬಿಟ್ಟಳು.
ನೈಟ್ ಶಿಫ್ಟ್ ಅಂತ ಹೊರ ಹೋದ ಗಂಡನ ಫಾಲೋ ಮಾಡಿದಳು. ಈ ವೇಳೆ ಅಪರಿಚಿತರ ಮನೆ ಮುಂದೆ ಗಂಡನ ಬೈಕ್ ನೋಡಿ ಶಾಕ್ ಆದಳು. ಅಂತೆಯೇ ತನ್ನ ಪತಿಯ ಮೇಲೆ ಆಕೆಗೆ ಅನುಮಾನ ಬರಲು ಆರಂಭವಾಯಿತು. ಕೊನೆಗೆ ಒಂದು ದಿನ ಆಕೆ ಪತಿಯ ನೈಟ್ ಶಿಫ್ಟ್ ರಹಸ್ಯ ಭೇದಿಸಿಯೇ ಬಿಟ್ಟಳು. ನೈಟ್ ಶೀಫ್ಟ್ ಅಂತ ಹೇಳಿಕೊಂಡು ಹೋಗುತ್ತಿದ್ದ ಪತಿ ಆತನ ಪ್ರಿಯತಮೆಯ ಮನೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ಟ. ಮಂಚನದ ಕೆಳಗೆ ಅವಿತು ಕೂತಿದ್ದ ಪತಿರಾಯನನ್ನು ನೋಡಿ ಪತ್ನಿಯ ಸಿಟ್ಟು ನೆತ್ತಿಗೇರಿತ್ತು.
ಈ ವೇಳೆ ಪತಿಮಹಾಶಯನು ಪತ್ನಿಯನ್ನು ಯಾಕೆ ಬಂದೆ ಅಂತ ಪ್ರಶ್ನಿಸಿ ಅಲ್ಲಿಯೇ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ. ಪ್ರೀತಿಸಿ ಮದುವೆಯಾದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಭಿಲಾಷ ತನ್ನ ತಂಗಿಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ.
ಶ್ರೀ ರಾಮಪುರ ಪೊಲೀಸರು ಮೃತಳ ಪತಿ ಶಶಿಕುಮಾರ್ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.