ಬೆಳಗಾವಿ: ಕಾಡಿನಲ್ಲಿ ಬೆಂಕಿ ನಂದಿಸುವ ಕಾರ್ಮಿಕರ ಬಾಳಿಗೇ ಅರಣ್ಯ ಅಧಿಕಾರಿಗಳು ಬೆಂಕಿಯಿಟ್ಟರಾ ಎಂಬ ಪ್ರಶ್ನೆ ಕಾಡುತ್ತಿದ್ದು, ಒಂದು ಹೊತ್ತು ಊಟಕ್ಕೂ ಗತಿಯಿಲ್ಲದೆ ಬಡ ಕುಟುಂಬಗಳು ಬೀದಿಗೆ ಬಂದಿವೆ.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪೂರ ಜಿಲ್ಲೆಯ ದಿನಗೂಲಿ ಕಾರ್ಮಿಕರನ್ನು ಅರಣ್ಯಾಧಿಕಾರಿಗಳು ಬೀದಿಗೆ ತಳ್ಳಿದ್ದಕ್ಕೆ ಪ್ರತಿಭಟನೆ ನಡೆಸಿದರು. ನರೇಗಾ ಯೋಜನೆಯಲ್ಲಿ ಕನಿಷ್ಟ 150 ದಿನಗಳಾದರೂ ಕೆಲಸ ನೀಡಿ ಮತ್ತು ನಮಗೆ ಜಾಬ್ ಕಾರ್ಡ್ ನೀಡಿ ಎಂಬುದು ಕಾರ್ಮಿಕರ ಬೇಡಿಕೆ. ದಿನಗೂಲಿ ಅರಣ್ಯ ಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ ನೀಡಿ ಎಂದು ಕಾರ್ಮಿಕ ಸಂಘಟನೆಗಳು ಡಿಸೆಂಬರ್ 23 ರಂದು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿವೆ. ಹೀಗಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರ ಆರೋಪವಾಗಿದೆ. ಇನ್ನೊಂದೆಡೆ ಕೆಲಸವಿದ್ದಾಗ ಮಾತ್ರ ನಾವು ದಿನಗೂಲಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಕಾರ್ಮಿಕರ ತೊಂದರೆ ಏನು ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರ ಜಾಬ್ ಕಾರ್ಡ್ ಇಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತೇನೆ. ಕಾರ್ಮಿಕರ ಸಮಸ್ಯೆ ಸುಖಾಂತ್ಯವಾಗುವ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಸಿಎಫ್ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ತುರ್ತು ಕೆಲಸಕ್ಕಾಗಿ ನಿಯೋಜನೆಗೊಂಡ ದಿನಗೂಲಿ ನೌಕರರು ಕಾಡಿಗೆ ಬೆಂಕಿ ಬಿದ್ದಾಗ ಅಥವಾ ಕಾಡುಪ್ರಾಣಿಗಳು ನಾಡಿಗೆ ಬಂದಾಗ ತುರ್ತು ಕೆಲಸವನ್ನು ನಿರ್ವಹಿಸುವ ಕೌಶಲ ಹೊಂದಿದವರು. ಕಾಡಿಗೆ ಬೆಂಕಿ ಬಿದ್ದಾಗ ತಕ್ಷಣ ಕಾರ್ಯಪ್ರವರ್ತರಾಗುವ ಇವರ ಬಾಳಲ್ಲಿ ಈಗ ಬೆಂಕಿ ಬಿದ್ದಿದೆ. ಕೆಲಸವಿಲ್ಲ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿ ಇವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಕ್ವಾಟ್ರಸ್ ಖಾಲಿ ಮಾಡಿ ಇಲ್ಲದಿದ್ದರೆ ಪಾತ್ರೆಗಳನ್ನು ಹೊರಕ್ಕೆ ಬೀಸಾಡುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ.