ಬೆಂಗಳೂರು: ಬಿಬಿಎಂಪಿಯ ಪಾದರಾಯನಪುರದ ವಾರ್ಡ್ನ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾಗೆ ಹೈಕೋರ್ಟ್ 5 ಸಾವಿರ ರೂ. ದಂಡವನ್ನು ವಿಧಿಸಿದೆ.
ಜೂನ್ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ರೋಡ್ ಶೋ ನಡೆಸಿ ಕೋವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ 7 ದಿನಗಳ ಒಳಗೆ ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಈ ವೇಳೆ ಅಧೀನ ನ್ಯಾಯಾಲಯದಿಂದ ಜಾಮೀನು ಪಡೆದ ವಿಚಾರವನ್ನು ಹೈಕೋರ್ಟ್ಗೆ ತಿಳಿಸದ್ದಕ್ಕೆ ಏಕಸದಸ್ಯ ಪೀಠ ಅಸಮಾಧಾನವನ್ನು ವ್ಯಕ್ತಪಡಿಸಿತು. ಇಮ್ರಾನ್ ಪಾಷಾ ಜೊತೆಗೆ ಉಳಿದ 21 ಕಾರ್ಯಕರ್ತರಿಗೆ ತಲಾ 5 ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿದೆ.
ಏನಿದು ಪ್ರಕರಣ?
ಕೋವಿಡ್ 19 ನಿಂದಾಗಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಇಮ್ರಾನ್ ಪಾಷಾ ಜೂನ್ 7ರಂದು ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಪಾಷಾರನ್ನು ಕಾರ್ಯಕರ್ತರು ವಿಕ್ಟೋರಿಯಾ ಆಸ್ಪತ್ರೆಯಿಂದ ಹೂ ಮಳೆಯನ್ನು ಸುರಿಸಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಪಾದರಾಯನಪುರದಲ್ಲಿರುವ ನಿವಾಸಕ್ಕೆ ಕರೆ ತಂದಿದ್ದರು.
ಈ ವೇಳೆ ಬೈಕ್ಗಳಲ್ಲಿ ಕುಳಿತವರು ಹಲ್ಮೆಟ್ ಇಲ್ಲದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದಿದ್ದರೂ ಗುಂಪಾಗಿ ಮೆರವಣಿಗೆ ಮಾಡಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಾಜಕೀಯ ಮೆರವಣಿಗೆ ನಡೆಸಬಾರದು ಎಂದು ಸೂಚಿಸಿದ್ದರೂ ಭಾರೀ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಕೋವಿಡ್ 19 ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಜೆಜೆ ನಗರ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ಇಮ್ರಾನ್ ಪಾಷಾ ಜೊತೆ 21 ಕಾರ್ಯಕರ್ತರನ್ನು ಬಂಧಿಸಿದ್ದರು.
ಹಾಟ್ ಸ್ಪಾಟ್ ಆಗಿದ್ದ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಯಾವುದೇ ಕ್ರಮಕೈಗೊಳ್ಳದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಗಮಿಸಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಇದೊಂದು ಬೇಜವಾಬ್ದಾರಿ ನಡೆಯಾಗಿದೆ. ಕ್ರಿಮಿನಲ್ ಅಪರಾಧವಾಗಿದ್ದು ಇದಕ್ಕಾಗಿ ಸ್ಥಳಕ್ಕೆ ನಾನೇ ಬಂದಿದ್ದೇನೆ. ಸೂಕ್ಷ್ಮ ವಲಯವಾಗಿರುವ ಈ ಸ್ಥಳದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ್ದಕ್ಕೆ ಬಂಧಿಸಲಾಗಿದೆ ಎಂದು ತಿಳಿಸಿದ್ದರು.