ಕಾರವಾರ: ಬೆಂಗಳೂರು ಮಹಾನಗರ ಪಾಲಿಕೆಯ ಪಾದರಾಯನಪುರದ ವಾರ್ಡ್ನಲ್ಲಿರುವ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರನ್ನು ನಾಮಕರಣ ಮಾಡುವುದುನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾದರಾಯನಪುರದ ವಾರ್ಡ್ ಸಂಖ್ಯೆ 135 ರಲ್ಲಿ ಬರುವ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರು ಇಡಲು ತೀರ್ಮಾನಿಸಿತ್ತು. ಈ ಸಂಬಂಧ ಪತ್ರಿಕಾ ಪ್ರಕಟಣೆ ಸಹ ನೀಡಿತ್ತು. ಈ ಸಂಬಂಧ ಕೇವಲ ಮುಸಲ್ಮಾನರ ಹೆಸರನ್ನು ಶಿಫಾರಸ್ಸು ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಸಮಾಜ ಸೇವಕರ ಹೆಸರಿನಲ್ಲಿ ಕೇವಲ ಮುಸಲ್ಮಾನರ ಹೆಸರು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಸಮಾಜ ಸೇವಕರ ಹೆಸರಿನಲ್ಲಿ ಕೋಮು ವೈಭವೀಕರಣ ಮಾಡುವುದು ಸರಿಯಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಈ ನಿರ್ಧಾರದಿಂದ ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ.
ಬಹುಸಂಖ್ಯಾತ ಹಿಂದೂಗಳ ಬಾಹ್ಯವುಳ್ಳ ನಗರಸಭೆ, ಪಟ್ಟಣ ಪಂಚಾಯತ್, ಪುರಸಭೆಗಳು ಇದೇ ನಿರ್ಧಾರವನ್ನು ತೆಗೆದುಕೊಂಡರೆ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ. ಒಂದು ಕೋಮಿನ ತುಷ್ಟೀಕರಣ ಮಾಡಲು ಈ ರೀತಿ ಕ್ರಮ ಸರಿಯಲ್ಲ. ಬಿಬಿಎಂಪಿ ಈ ನಿರ್ಣಯ ಬೇಜವಬ್ದಾರಿಯ ಪರಮಾವಧಿ. ರಸ್ತೆಗಳಿಗೆ ಸ್ವಾತಂತ್ರಕ್ಕಾಗಿ ಹೋರಾಡಿದ ಹೋರಾಟಗಾರರು, ರಾಷ್ಟ್ರಕಂಡ ಮಹಾನ್ ನಾಯಕರು ಹಾಗೂ ಸೈನಿಕರ ಹೆಸರು ಇಡಬೇಕು. ಇದರಿಂದ ಪಾದರಾಯನಪುರ ಹೆಸರಿಗೂ ಗೌರವ ದೊರಕಿದಂತಾಗುತ್ತದೆ.