ಬೆಂಗಳೂರು: ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆ ಬಾಗಿಲಿಗೆ ಅಡ್ಡಲಾಗಿ ತಗಡಿನ ಶೀಟ್ ಹಾಕಿ ಸೀಲ್ಡೌನ್ ಮಾಡಿತ್ತು. ಇದೀಗ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ತಗಡಿನ ಶೀಟ್ ಅನ್ನು ತೆಗೆದು ಹಾಕಿದೆ. ಇದನ್ನೂ ಓದಿ: ಏರಿಯಾ ಸೀಲ್ ಬದಲು ಮನೆ ಬಾಗಿಲೇ ಸೀಲ್ಡೌನ್- ಚೀನಾದಲ್ಲಿ ಕಂಡು ಬರ್ತಿದ್ದ ದೃಶ್ಯ ಬೆಂಗಳೂರಲ್ಲಿ
ಗುರುವಾರ ಶಾಂತಿನಗರದ ಅಪಾರ್ಟ್ಮೆಂಟ್ನಲ್ಲಿ ಇದೇ ರೀತಿ ಮನೆಯ ಬಾಗಲಿಗೆ ತಗಡಿನ ಶೀಟ್ ಹಾಕಿದ್ದರು. ಮೂರು ಗಂಟೆಯ ನಂತರ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಶೀಟ್ ಅನ್ನು ತೆಗೆದು ಹಾಕಿದ್ದ. ಆದರೆ ಇದೀಗ ವಿವೇಕನಗರದಲ್ಲಿರುವ ಮನೆಯನ್ನು ಸೀಲ್ಡೌನ್ ಮಾಡಿದೆ. ವಿವೇಕನಗರದಲ್ಲಿ ಪಾಸಿಟಿವ್ ಬಂದ ಹುಡುಗ ವಾಸವಿದ್ದ ಕಟ್ಟಡವನ್ನೇ ಬಿಬಿಎಂಪಿ ಅಧಿಕಾರಿಗಳು ತಗಡಿನ ಶೀಟ್ ಹಾಕಿ ಸೀಲ್ಡೌನ್ ಮಾಡಿದ್ದಾರೆ.
ಮನೆಯ ಸಂಪೂರ್ಣ ಗೇಟ್ಗೆ ತಗಡಿನ ಶೀಟ್ ಹಾಕಿ ಮನೆಯಿಂದ ಯಾರು ಹೊರ ಬರದಂತೆ ಕಂಪ್ಲೀಟ್ ಸೀಲ್ಡೌನ್ ಮಾಡಲಾಗಿತ್ತು. ಕಳೆದ ಭಾನುವಾರದಿಂದ ಮನೆಯ ಗೇಟ್ಗೆ ತಗಡು ಹಾಕಿ ಸೀಲ್ಡೌನ್ ಮಾಡಲಾಗಿತ್ತು. ಇದರಿಂದ ಕಳೆದ ನಾಲ್ಕು ದಿನಗಳಿಂದ ಆ ಕಟ್ಟಡದಲ್ಲಿ ವಾಸ ಮಾಡುತ್ತಿದ್ದ ಯಾರೋಬ್ಬರು ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಅಲ್ಲದೇ ಅಗತ್ಯ ವಸ್ತುಗಳನ್ನು ಕೂಡ ನೀಡಲು ನೆರೆಹೊರೆಯವರು ಸಹಾಯ ಮಾಡಿಲ್ಲ. ಸೀಲ್ಡೌನ್ ಮಾಡಿದ್ದರಿಂದ ಆ ಮನೆಯ ಮುಂದೆ ಓಡಾಡಲು ಜನರು ಭಯಪಡುತ್ತಿದ್ದರು.
ಕೊನೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಫೋನ್ ಮಾಡಿ ಅಗತ್ಯ ವಸ್ತುಗಳುನ್ನು ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ನಾಲ್ಕು ದಿನಗಳಾದರೂ ಈ ಕಡೆ ಯಾವ ಅಧಿಕಾರಿಯೂ ಬಂದಿರಲಿಲ್ಲ. ಇದೀಗ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಬಂದು ತಗಡಿನ ಶೀಟ್ ತೆರವು ಮಾಡಿದ್ದಾರೆ.
ಮನೆಯ ಬಾಗಿಲಿಗೆ ತಡಗು ಹಾಕಿ ಸೀಲ್ಡೌನ್ ಮಾಡುವಂತೆ ಬಿಬಿಎಂಪಿಯ ಕಾರ್ಯ ಪಾಲಕ ಎಂಜಿನಿಯರ್ ಐಡಿಯಾ ಕೊಟ್ಟಿದ್ದರು. ಕಂಟೈನ್ಮೆಂಟ್ ಝೋನ್ ಮೇಲ್ವಿಚಾರಕ ರಾಧಾಕೃಷ್ಣ ಅವರು ಈ ರೀತಿಯಾಗಿ ತಡಗಿನ ಶೀಟ್ ಹಾಕಿ ಸೀಲ್ಡೌನ್ ಮಾಡುವಂತೆ ತಿಳಿಸಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ನಾಲ್ಕು ದಿನದಿಂದ ನಮಗೆ ಹಾಲು, ದಿನಸಿ, ಔಷಧಿಯ ಸಹಾಯವನ್ನು ಮಾಡಲು ಕೂಡ ಯಾರು ಬಂದಿಲ್ಲ. ನಾವು ಹೊರ ಹೋಗೋಣ ಎಂದರೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಬಿಬಿಎಂಪಿಗೆ ಫೋನ್ ಮಾಡಿದ್ದರೂ ಯಾವ ಅಧಿಕಾರಿಯೂ ಬಂದಿಲ್ಲ. ನಾಲ್ಕು ದಿನದಿಂದ ನಾವು ತುಂಬಾ ಕಷ್ಟ ಪಟ್ಟಿದ್ದೇವೆ. ಇಂದು ಅಧಿಕಾರಿಯೊಬ್ಬರು ಬಂದಿದ್ದರು. ಈಗ ಎಂಜಿನಿಯರ್ ವಿರುದ್ಧ ಬಿಬಿಎಂಪಿ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಮನೆಯಲ್ಲಿ ವಾಸಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಗ್ರಹಿಸಿದ್ದಾರೆ.
ಗುರುವಾರ ಶಾಂತಿನಗರದ ಅಪಾರ್ಟ್ ಮೆಂಟ್ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆ ಬಾಗಿಲಿಗೆ ಅಡ್ಡಲಾಗಿ ಶೀಟ್ ಹಾಕಿದ್ದರು. ಆ ಮೂಲಕ ಸೋಂಕಿತ ವ್ಯಕ್ತಿ ಮನೆಯಿಂದ ಹೊರಬರದಂತೆ ಸೀಲ್ಡೌನ್ ಮಾಡಲಾಗಿತ್ತು. ಅಧಿಕಾರಿಗಳ ಎಡವಟ್ಟು ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹಂಚಿಕೊಂಡಿದ್ದರು. ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ, ಸೀಲ್ಡೌನ್ ಮಾಡಿದ್ದ ಮೂರು ಗಂಟೆಯ ಬಳಿಕ ಶೀಟನ್ನು ತೆರವು ಮಾಡಿತ್ತು.