– ಮೇ 24 ರಂದು ಹೊಸಪೇಟೆಯಲ್ಲಿ ಸಮಾರಂಭ
– ನಿಬಂಧನೆಗಳಿದ್ರೂ ಭರ್ಜರಿ ಸಿದ್ಧತೆ
ಬಳ್ಳಾರಿ: ದೇಶಕ್ಕೊಂದು ನ್ಯಾಯ ಇವರಿಗೊಂದು ನ್ಯಾಯ? ಸಾಮಾನ್ಯ ಜನರು ಮದುವೆ ಮಾಡಿದ್ರೆ ದಾಳಿ, ಇವರು ಮದುವೆ ಮಾಡಿದ್ರೆ ನಡೆಯುತ್ತಾ ಅನ್ನುವ ಅನುಮಾನ ಸಾಮಾನ್ಯ ಜನರಲ್ಲಿ ಮೂಡುತ್ತಿದೆ. ಅದಕ್ಕೆ ಕಾರಣ ಬಳ್ಳಾರಿ ಜಿಲ್ಲೆಯ ಗಣಿ ನಾಡು ಹೊಸಪೇಟೆಯಲ್ಲಿ ಅದ್ಧೂರಿ ಮದುವೆ ಒಂದು ನಡೆಸಲು ಸಿದ್ಧತೆ ಭರದಿಂದ ಸಾಗಿದೆ.
ಇದೇ ತಿಂಗಳ 24 ರಂದು ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರಾಣಿ ಸಂಯುಕ್ತ ಸಿಂಗ್ ಅವರ ಏಕೈಕ ಪುತ್ರಿ ವೈಜಯಂತಿ ರೆಡ್ಡಿ ಹಾಗೂ ಮಾಜಿ ಶಾಸಕ ಬಳ್ಳಾರಿ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಭರತ್ ರೆಡ್ಡಿ ಅವರ ಅದ್ಧೂರಿ ಮದುವೆ ನಡೆಸಲು ಸಿದ್ಧತೆಗಳು ಭರದಿಂದ ಸಾಗಿದೆ. ಹಂಪಿ ಉತ್ಸವವನ್ನು ಮೀರಿಸುವಂತೆ ಕಿಲೋಮೀಟರ್ ಗಟ್ಟಲೆ ಲೈಟಿಂಗ್ ಮಾಡಿಸಿ ಅದ್ಧೂರಿ ಮದುವೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮದ ಪ್ರಕಾರ ಕೇವಲ 50 ಜನರು ಮಾತ್ರ ಸಮಾರಂಭದಲ್ಲಿ ಭಾಗಿ ಆಗಬೇಕು. ಮದುವೆಗೆ ಬಂದ ಜನರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅಲ್ಲದೇ 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ವಯೋಮಿತಿ ಜನರು ಮದುವೆಗೆ ಬರುವುದಕ್ಕೆ ನಿರ್ಬಂಧ ಹಾಕಲಾಗಿದೆ. ಆದರೆ ಇಷ್ಟೊಂದು ಅದ್ಧೂರಿಯಾಗಿ ಮಾಡುವ ಈ ಮದುವೆಯಲ್ಲಿ ಕೇಂದ್ರ ಸರ್ಕಾರ ಹಾಕಿದ 17 ನಿಯಮಗಳ ಪಾಲನೆ ಆಗಲಿದೆಯಾ ಎನ್ನುವುದು ದೊಡ್ಡ ಪ್ರಶ್ನೆ ಕಾಡುತ್ತಿದೆ.
ಜಿಲ್ಲಾಡಳಿತ ಈಗಾಗಲೇ ಕೇಂದ್ರ ಸರ್ಕಾರ ಹಾಕಲಾದ ನಿಯಮಗಳ ಪ್ರಕಾರ ಮದುವೆ ಅನುಮತಿ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಮೇ 31ರವರೆಗೆ ಮುಂದುವರಿಸಿದೆ. ಹೀಗಾಗಿ ಈ ಮದುವೆ ಕೇಂದ್ರ ಸರ್ಕಾರದ ನಿಯಮದಂತೆ ನಡೆಯುತ್ತಾ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.