ಮಂಡ್ಯ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಸಹಮತವಿದೆ, ಆದರೆ ವಿಲೀನಕ್ಕೆ ನನ್ನ ವಿರೋಧವಿದೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಸ್ಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ವಿಲೀನಕ್ಕೆ ನನ್ನ ವಿರೋಧ ಇದೆ. ಬಿಜೆಪಿ ಜಾತಿ ಆಧಾರದಲ್ಲಿ ಪಕ್ಷ ಕಟ್ಟಲು ಹೊರಟಿದೆ. ಬಿಜೆಪಿ ಸಿದ್ದಾಂತಕ್ಕೂ ನಮ್ಮ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದರು.
ಕೆಲವು ರಾಜಕೀಯ ವಿಚಾರ ಬಂದಾಗ ಹೊಂದಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ. ಮೈತ್ರಿಗೆ ಸಹಮತ ಇದೆ. ಆದ್ರೆ ವೀಲನಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು. ಇದನ್ನೂ ಓದಿ: ಕೆಲ ವಿಷಯಗಳಲ್ಲಿ ದಳದ ಜೊತೆ ಹೊಂದಾಣಿಕೆ: ಗೋವಿಂದ ಕಾರಜೋಳ
ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತೆ. ಈಗಿದ್ದ ಸನ್ನವೇಶ ರಾತ್ರಿ 10 ಗಂಟೆ ಆದ ಬಳಿಕ ಏನು ಬೇಕಾದರು ಆಗಬಹುದು. ರಾಜಕೀಯ ನಿಂತ ನೀರಲ್ಲ. ಬದಲಾವಣೆ ಸಹಜ ಎಂದು ತಿಳಿಸಿದರು.