-ರಾಹುಲ್ ಗಾಂಧಿ ನಿಲ್ಲಲು ಕ್ಷೇತ್ರ ಹುಡುಕುವಂತಾಗಿದೆ
-ಅಂಬೇಡ್ಕರ್ ಅವರಿಗೆ ದ್ರೋಹ ಮಡಿದ್ದು ಕಾಂಗ್ರೆಸ್
ಚಾಮರಾಜನಗರ: ಬಿಜೆಪಿ ಈಗ ಕೇವಲ ಬ್ರಾಹ್ಮಣರ ಪಾರ್ಟಿಯಾಗಿ ಉಳಿದಿಲ್ಲ. ಅದು ಕೇವಲ ವಿದ್ಯಾವಂತರ ಪಕ್ಷವಲ್ಲ, ಕೇವಲ ನಗರ ಕೇಂದ್ರೀಕೃತ ಪಕ್ಷವಲ್ಲ, ಈಗ ಸರ್ವಸ್ಪರ್ಶಿ, ಸರ್ವಗ್ರಾಹಿ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಚಾಮರಾಜನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಎಲ್ಲ ವರ್ಗಗಳ ಪಕ್ಷವಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ವ್ಯಾಪಿಸಿದೆ. ಕಾಂಗ್ರೆಸ್ ನಿಂದ ಒಂದು ವಿದ್ಯುತ್ ಕಂಬ ನಿಲ್ಲಿಸಿದರು ಗೆಲುವು ನಿಶ್ಚಿತ ಎಂಬ ಕಾಲವಿತ್ತು. ಅದರೆ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನಿಲ್ಲಲು ಕ್ಷೇತ್ರ ಹುಡುಕುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರನ್ನು ಜನರು ವರುಣಾ ಕ್ಷೇತ್ರದಿಂದ ಗುಡಿಸಿ ಹೊರ ಹಾಕಿದರು. ಕಾಂಗ್ರೆಸ್ ಗೆ ಅಂಬೇಡ್ಕರ್ ಶಾಪ ತಟ್ಟಿದೆ. ಅಂಬೇಡ್ಕರ್ ಗೆ ಅತಿ ಹೆಚ್ಚು ದ್ರೋಹ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಂಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಅವರ ಮತ ಬ್ಯಾಂಕ್ ಬೇಕಿತ್ತು ಅಷ್ಟೆ. ಆದರೆ ಅಂಬೇಡ್ಕರ್ ಬೇಡವಾಗಿದ್ದರು, ಸರ್ವಶ್ರೇಷ್ಠ ಸಂವಿಧಾನ ಕೊಟ್ಟವರು ಅಂಬೇಡ್ಕರ್, ಚಹಾ ಮಾರುವವರ ಮಗ ದೇಶದ ಪ್ರಧಾನಿ ಆಗಲು ಅಂಬೇಡ್ಕರ್ ಕಾರಣ, ಎಸ್ಸಿ-ಎಸ್ಟಿ ಜನಾಂಗದ ಬಗ್ಗೆ ಕಣ್ಣೀರು ಹಾಕಿಸಿದ ಕಾಂಗ್ರೆಸ್ ಅವರನ್ನು ಉದ್ಧಾರ ಆಗಲು ಬಿಡಲಿಲ್ಲ ಶಿಕ್ಷಣ, ಉದ್ಯೋಗ ನೀಡದೆ ಕೇವಲ ಮತಬ್ಯಾಂಕ್ ಮಾಡಿಕೊಂಡಿತ್ತು ಎಂದು ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.