ದಾವಣಗೆರೆ: ಬಿಜೆಪಿಯವರು ಕಾಂಗ್ರೆಸ್ಗೆ ಸಪೋರ್ಟ್ ಮಾಡುತ್ತೇವೆ ಸಿಎಂ ಆಗಿ ಎಂದಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಕಾಂಗ್ರೆಸ್ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ಕೂಡ ಸಿಎಂ ಆಗೋದಕ್ಕೆ ರೆಡಿಯಾಗಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ್ ಅವರು, ನಮ್ಮ ಅಪ್ಪಾಜ್ಜಿ ಸಿಎಂ ಆಗೋದಕ್ಕೆ ಬಿಜೆಪಿಯವರು ಕಾಂಗ್ರೆಸ್ ಗೆ ಸಪೋರ್ಟ್ ಮಾಡ್ತಾರಂತೆ ಎಂದು ನಗೆ ಚಟಾಕಿ ಹಾರಿಸಿದರು. ಸಿಎಂ ಆಗೋದಕ್ಕೆ ನಾನು ಬೇಡಾ ಎನ್ನಬೇಕಾ ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ನಮ್ಮ ಕಾಂಗ್ರೆಸ್ ನಲ್ಲಿ ಒಂದು ಸಂಸ್ಕಂತಿ ಇದೆ, ಸೀನಿಯಾರಿಟಿ, ಹಾಗೂ ಶಾಸಕರು ಆರಿಸಿದ ವ್ಯಕ್ತಿ ಸಿಎಂ ಆಗುತ್ತಾರೆ ಎಂದರು.
ಇದನ್ನೂ ಓದಿ: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಎಸ್.ಆರ್.ಪಾಟೀಲ್
ಈಗಾಗಲೇ ಡಿಕೆಶಿ ಹೇಳಿದ್ದಾರೆ ಚುನಾವಣೆಯಲ್ಲಿ ನಿಲ್ಲದೆ ಇರುವವರನ್ನು ಸಿಎಂ ಮಾಡಿದ್ದೇವೆ. ಹಾಗೇ ಸಿಎಂ ಅಗುವವರು ಬಹಳ ಜನ ಇರ್ತಾರೆ. ಶಾಸಕರು ಕೆಲವರ ಹೆಸರನ್ನು ಸಿಎಂ ಅಭ್ಯರ್ಥಿ ಎಂದು ಸೂಚಿಸುವುದು ಅವರವರ ವೈಯಕ್ತಿಕ ವಿಚಾರ. ಡಿಕೆಶಿ ಎಲ್ಲಾ ಕಾಂಗ್ರೆಸ್ ಶಾಸಕ, ಮುಖಂಡರ ಜೊತೆ ಮೀಟಿಂಗ್ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ನಾವೇಲ್ಲ ಶ್ರಮವಹಿಸಬೇಕು. ಪಕ್ಷವನ್ನು ಒಗ್ಗಟ್ಟಿನಿಂದ ಅಧಿಕಾರಕ್ಕೆ ತರಬೇಕು, ಹೈಕಮಾಂಡ್ ಇದೆ, ಸೀನಿಯಾರಿಟಿ ಮತ್ತು ಎಲ್ಲಾ ಎಂಎಲ್ಎಗಳು ಸಿಎಂ ರನ್ನು ಆರಿಸುತ್ತಾರೆ. ಈಗಲೇ ಸಿಎಂ ಅಭ್ಯರ್ಥಿ ಎಂದು ಯಾರನ್ನು ನಮ್ಮ ಪಕ್ಷದಲ್ಲಿ ಘೋಷಣೆ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.