ಲಕ್ನೋ: 20 ವರ್ಷಗಳ ಕಾಲ ನರೇಂದ್ರ ಮೋದಿಯವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ಇಂದು ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆ ಜ.28 ರಂದು ನಡೆಯಲಿದೆ. ಒಟ್ಟು 12 ಸ್ಥಾನಗಳಿಗೆ ನಡೆಯುವ ಈ ಚುನಾವಣೆಯಲ್ಲಿ ಅರವಿಂದ್ ಶರ್ಮಾ ಅವರನ್ನು ಯೋಗಿ ಸರ್ಕಾರ ಕಣಕ್ಕೆ ಇಳಿಸುವ ಸಲುವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರದ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಇವರು ಕೆಲ ದಿನಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು. ಉತ್ತಮ ಅಧಿಕಾರಿಯೆಂದು ಹೆಸರು ಪಡೆದಿದ್ದ ಇವರು ಸ್ವಯಂ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಹಲವು ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ರಾಜಕೀಯ ಸೇರಲೆಂದೇ ಅವರು ರಾಜೀನಾಮೆ ನೀಡಿರುವ ವಿಚಾರ ಈಗ ಪ್ರಕಟವಾಗಿದೆ.
1988ರ ಗುಜರಾತ್ ಕೇಡರ್ ಐಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ ಉತ್ತರ ಪ್ರದೇಶದ ಅರವಿಂದ್ ಶರ್ಮಾ ದೆಹಲಿಯಲ್ಲಿ ಮಾತ್ರ ಮೋದಿ ಜೊತೆ ಕೆಲಸ ಮಾಡಿರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಜೊತೆಯಲ್ಲೇ ಕೆಲಸ ಮಾಡಿ ವಿಶ್ವಾಸಗಳಿಸಿದ್ದರು.
2014ರಲ್ಲಿ ಗುಜರಾತ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಶರ್ಮಾ2014ರಲ್ಲಿ ಪ್ರಧಾನಿ ಸಚಿವಾಲಯದ ಅಧಿಕಾರಿಯಾಗಿ ನೇಮಕಗೊಂಡಿದ್ದರು.
माननीय प्रदेश अध्यक्ष श्री @swatantrabjp जी व उप मुख्यमंत्री @drdineshbjp जी के समक्ष पार्टी प्रदेश मुख्यालय में पूर्व आईएएस अधिकारी श्री अरविन्द कुमार शर्मा जी ने भाजपा की सदस्यता ग्रहण की। pic.twitter.com/fIuH9mprWO
— BJP Uttar Pradesh (@BJP4UP) January 14, 2021
ಮೋದಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಶರ್ಮಾ ಅವರನ್ನು ಮೇ ತಿಂಗಳಿನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಲಾಕ್ಡೌನ್ ತೆರವಾದ ಬಳಿಕ ಸಣ್ಣ ಮತ್ತು ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವಾಗುವ ಸಂಬಂಧ ಕೇಂದ್ರದ ಮಹತ್ವದ ನಿರ್ಧಾರಗಳ ಹಿಂದೆ ಇವರ ಆಲೋಚನೆಯೂ ಕೆಲಸ ಮಾಡಿತ್ತು.