ಹುಬ್ಬಳ್ಳಿ: ಬಿಜೆಪಿಯ 105 ಶಾಸಕರು ಹಾಗೂ ಬೇರೆ ಪಕ್ಷದ 17 ಶಾಸಕರಿಂದಲೇ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಗೆ ಬಂದ ಶಾಸಕರು ಹೊಸದಾಗಿ ಬಂದ ಸೊಸೆಯಂದಿರು ಇದ್ದಂತೆ. ಅವರು ಚೆನ್ನಾಗಿದ್ದರೆ ಮನೆ ಚೆನ್ನಾಗಿರುತ್ತೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಅಹ ಧರ್ಮವಾಗಿದೆ ಎಂದು ಹೇಳುವ ಮೂಲಕ ವಲಸಿಗ ಶಾಸಕರಿಗೆ ಸೂಕ್ತ ಸ್ಥಾನಮಾನ ಕೊಡುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರಾದವರಿಗೆ ಸಚಿವರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ಸಚಿವ ಸ್ಥಾನಕ್ಕಾಗಿ ಪೈಪೋಟಿ ಮಾಡುವರೇ. ಸಚಿವ ಸಂಪುಟ ವಿಸ್ತರಣೆ ವಿಚಾರ ಬಂದಾಗ ಈ ರೀತಿ ಆಗುವುದು ಸಹಜ. ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತಿಕ್ಕಾಟ ಇಲ್ಲ, ಮೂಲ ಬಿಜೆಪಿ ಮತ್ತು ವಲಸಿಗರ ನಡುವೆ ಭಿನ್ನಾಭಿಪ್ರಾಯವಿಲ್ಲ. ಸಚಿವ ಸ್ಥಾನಕ್ಕಾಗಿ ಬೇರೆ ಬೇರೆ ರೀತಿಯ ಸ್ವರ ಬರುವುದು ಸಹಜ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಚಿವ ಸ್ಥಾನಕ್ಕಾಗಿ ಎಲ್ಲ ಶಾಸಕರಲ್ಲೂ ಆಸೆ ಇರುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಲಾಬಿ ಮಾಡಬೇಕು ಎನ್ನುವ ಪರಿಸ್ಥಿತಿ ಇಲ್ಲ. ಪಕ್ಷದ ಹಿರಿಯರು ರಾಜ್ಯದ ಹಿತ ಕಾಪಾಡುವಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಕನ್ನಡ ಪರ ಸಂಘಟನೆ ಕಾರ್ಯಕರ್ತರು ವಸೂಲಿಗೆ ಇಳಿದಿದ್ದಾರೆ ಎಂಬ ಹೇಳಿಗೆ ನಾನು ಈಗಲೂ ಬದ್ಧ. ಅದನ್ನು ನಾನು ಸಾಬೀತು ಮಾಡುವ ಅವಶ್ಯಕತೆ ಇಲ್ಲ. ಅಂತವರು ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದರು.